ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತುಕೊಳ್ಳಲಿ: ಪ್ರತಾಪಸಿಂಹ ನಾಯಕ್
ಮಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ಅವರನ್ನು ಬಲಿಪಶು ಮಾಡಲಾಗಿದೆ. ಆರ್ಥಿಕ ಇಲಾಖೆ ಮುಖ್ಯಮಂತ್ರಿ ಕೈಯಲ್ಲಿರುವುದರಿಂದ ಅವರಿಗೆ ಗೊತ್ತಿದ್ದೇ ಹಣ ವರ್ಗಾವಣೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆರೋಪಿಸಿದರು.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವ್ಯವಹಾರದ ಹೊಣೆಯನ್ನು ಮುಖ್ಯಮಂತ್ರಿ ಹೊರಬೇಕು. ಸಿಎಂಗೆ ಗೊತ್ತಲ್ಲದೆ ಅಷ್ಟೊಂದು ಮೊತ್ತದ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹಣ ವರ್ಗಾವಣೆ ಪ್ರಕರಣವಾಗಿರುವುದರಿಂದ ಜಾರಿ ನಿರ್ದೇಶನಾಲಯ(ಈ.ಡಿ) ಪ್ರವೇಶ ಆಗಿದೆ. ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಯೂನಿಯನ್ ಬ್ಯಾಂಕ್ನ ದೂರಿನ ಮೇರೆಗೆ ಈ.ಡಿ ಅಧಿಕಾರಿಗಳ ತಂಡ ಆಗಮಿಸಿದೆ. ಅವರನ್ನು ಕೇಂದ್ರ ಸರಕಾರ ಕಳುಹಿಸಿದ್ದಲ್ಲ. ಈ.ಡಿ ಪ್ರವೇಶದ ಬಗ್ಗೆ ಕಾಂಗ್ರೆಸ್ ತಕರಾರು ಎತ್ತಿದೆ. ಇದು ಕಾಂಗ್ರೆಸ್ ನೈತಿಕ ಅಧಃಪತನವನ್ನು ತೋರಿಸುತ್ತದೆ ಎಂದರು.
ಮೈಸೂರಿನ ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿಗೆ ಅಕ್ರಮ ಸೈಟ್ ವಿತರಿಸಲಾಗಿದ್ದು, ಅದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆ ದಿದೆ. ಮುಡಾ ನಿಯಮದ ಪ್ರಕಾರ ಮೂರು ಎಕರೆ ವಶಪಡಿಸುವುದಿದ್ದರೆ ಜಾಗದ ಮಾಲಿಕರಿಗೆ ಎರಡು ಸೈಟ್ ನೀಡ ಬಹುದು. ಆದರೆ ಇಲ್ಲಿ 14 ಸೈಟ್ ನೀಡಲಾಗಿದೆ. ಸಮಾಜವಾದ ಹಾಗೂ ಭ್ರಷ್ಟಾಚಾರ ವಿರುದ್ಧ ಮಾತನಾಡುವ ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ಪೂಜಾ ಪೈ, ಪೂರ್ಣಿಮಾ, ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.