ಮಂಗಳೂರು| ಚಡ್ಡಿಗ್ಯಾಂಗ್ನ ಸದಸ್ಯರಿಂದ ಮತ್ತಷ್ಟು ಸುಲಿಗೆ: ಪ್ರಕರಣ ಬೆಳಕಿಗೆ
Update: 2024-07-11 15:25 GMT
ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿಯ ಮನೆಯಲ್ಲಿ ಸುಲಿಗೆಗೈದ ಮಧ್ಯಪ್ರದೇಶ ಮೂಲದ ಚಡ್ಡಿಗ್ಯಾಂಗ್ನ ಸದಸ್ಯರು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸಹಿತ ದೇಶದ ಅನೇಕ ಕಡೆ ಲೂಟಿ, ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
*ಸುಲಿಗೆ ಪ್ರಕರಣದಲ್ಲಿ ಸೆರೆಯಾಗಿರುವ ಮಧ್ಯಪ್ರದೇಶದ ಗುಣಾಜಿಲ್ಲೆ ರಗೋಗರ್ ನಿವಾಸಿ ರಾಜು ಸಿಂಗ್ವಾನಿಯ ಮತ್ತು ಮಧ್ಯಪ್ರದೇಶ ಅಶೋಕನಗರ ನಿವಾಸಿ ಬಾಲಿ ಮಹಜರು ವೇಳೆ ಪ್ರತಿರೋಧವೊಡ್ಡಿದ ಪರಿಣಾಮ ಶೂಟೌಟ್ನಿಂದ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಮಧ್ಯಪ್ರದೇಶ ಭೂಪಾಲ್ ಗುಲಬ್ಗಂಜ್ ನಿವಾಸಿ ಮಯೂರ್, ಮಧ್ಯಪ್ರದೇಶ ಗುಣಾ ಕೋತ್ವಾಲಿ ನಿವಾಸಿ ವಿಕ್ಕಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖಾ ತಂಡ ನ್ಯಾಯಾಲಯದಲ್ಲಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದೆ.