ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸನ್ಮಾನ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ
ಮಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಸನ್ಮಾನಿಸಿರುವುದನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರವಾಗಿ ಖಂಡಿಸಿದೆ.
ಅ. 9ರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಸಂಘಪರಿವಾರ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರಾದ ಪರಶುರಾಮ್ ವಾಗ್ಮೋರೆ ಮತ್ತು ಮನೋಹರ ಯದ್ವಿ ಯನ್ನು ಹೂಹಾರ ಹಾಕಿ ಸನ್ಮಾನಿಸಿರುವುದು ಆಘಾತಕಾರಿಯಾಗಿದೆ. ಇದು ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಗೌರವಿಸುವ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಿದೆ. ಇದು ಕೇವಲ 2017 ಸೆಪ್ಟೆಂಬರ್ 5 ರಂದು ಮನುವಾದಿ ಗಳಿಂದ ಹತ್ಯೆಯಾದ ಅನ್ಯಾಯದ ವಿರುದ್ಧ ನಿರ್ಭೀತ ನಿಲುವಿಗೆ ಹೆಸರಾದ ಪತ್ರಕರ್ತ ಗೌರಿ ಲಂಕೇಶ್ ರವರ ಸ್ಮರಣೆಗೆ ಮಾತ್ರ ಮಾಡಿದ ಅವಮಾನವಲ್ಲ. ಬದಲಾಗಿ ಹೆಚ್ಚುತ್ತಿರುವ ಅಸಹಿಷ್ನುತೆ ವಿರುದ್ಧ ಕ್ರಿಯಾಶೀಲತೆ ಮತ್ತು ವಿಮರ್ಶಾತ್ಮಕ ನಿಲುವನ್ನು ಮೌನಗೊಳಿಸುವುದರೊಂದಿಗೆ ಅಲ್ಪಸಂಖ್ಯಾತ ಮತ್ತು ದಲಿತರ ಧ್ವನಿಯಾಗಿ ನಿರ್ಭೀತ ಹೋರಾಟ ಹಾಗೂ ಸಾಮಾಜಿಕ ಕಳಕಳಿಗಳಿಗೆ ಮಾಡಿದ ಘೋರ ಅವಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೌರಿ ಲಂಕೇಶ್ ರವರ ಹತ್ಯೆ ಆರೋಪಿಗಳನ್ನು ವೈಭವೀಕರಿಸುತ್ತಿರುವುದು ಹಿಂಸೆ ಮತ್ತು ದ್ವೇಷದ ಅಪಾಯಕಾರಿ ಅನುಮೋದನೆಯಾಗಿದೆ.
ಅಕ್ಟೋಬರ್ 9ರಂದು ಹತ್ಯಾ ಆರೋಪಿಗಳ ಮಾಸ್ಟರ್ ಮೈಂಡ್ ಅಮೋಲ್ ಕಾಳೆ, ಶೂಟರ್ ಪರಶುರಾಮ ವಾಗ್ಮೋರೆ ಸೇರಿದಂತೆ 8 ಆರೋಪಿಗಳು ಮತ್ತು ಪರಾರಿಯಾಗಿದ್ದ ಚಾಲಕ ಗಣೇಶ್ ಮಿಸ್ಕಿನ್ ಜಾಮೀನು ಮಂಜೂರಾಗಿದೆ. ಇತರೊಂದಿಗೆ ಸೇರಿ ಕುತಂತ್ರ ನಡೆಸಿ ಕೊಲೆ ಸಂಚು ರೂಪಿಸುವಲ್ಲಿ ಅದರ ನ್ಯಾಯಯುತ ಶಿಕ್ಷೆ ಅನುಭವಿಸದೆ ಸಮಾಜದಲ್ಲಿ ನಿರ್ಭೀತಿಯಿಂದಿರುವುದು ಆಘಾತಕಾರಿಯಾಗಿದೆ. ಅದರಲ್ಲೂ ಗೌರಿ ಲಂಕೇಶ್ ಹತ್ಯಾ ಪ್ರಕರಣದ 18 ಆರೋಪಿಗಳಲ್ಲಿ 16 ಮಂದಿ ಜಾಮೀನಿನಲ್ಲಿ ಹೊರಗಿದ್ದು ಒಬ್ಬ ವ್ಯಕ್ತಿ ಮಾತ್ರ ಸಂಬಂಧಿತ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವುದು ಆತಂಕಕಾರಿ.
ವಿಮೆನ್ ಇಂಡಿಯಾ ಮೂವ್ಮೆಂಟ್ ಈ ಸಾರ್ವಜನಿಕ ಅಭಿನಂದನೆಯು ಭಾರತದಲ್ಲಿ ನ್ಯಾಯ ಮತ್ತು ಹೊಣೆಗಾರಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಎಂಬ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ. ಗೌರಿಹತ್ಯೆಯು ಆಕಸ್ಮಿಕ ಘಟನೆ ಅಲ್ಲ. ಆರೋಪಿಗಳು ಸನಾತನ ಸಂಸ್ಥೆ, ಜಾಯಂತ್ ಬಾಲಾಜಿ ಆಟಲೆಯವರ ಕ್ಷಾತ್ರ ಧರ್ಮಾ ಸಾಧನ, ಮುಂತಾದವುಗಳಿಂದ ಪ್ರಭಾವಿತರಾಗಿ ನಡೆಸಿದ ಕೊಲೆಯಾಗಿದೆ ಎಂದು ವಿಶೇಷ ತನಿಖೆ ತಂಡ SIT ತನ್ನ ಅನ್ವೇಷಣಾ ವರದಿಯಲ್ಲಿ ತಿಳಿಸಿದೆ.
ಹೀಗಿರುವಾಗ ಇಂತಹ ಕಾರ್ಯಗಳು ನಿರ್ದಿಷ್ಟ ಸಿದ್ಧಾಂತದ ಹೆಸರಿನಲ್ಲಿ ನಡೆದಾಗ ಖಂಡಿಸುವ ಬದಲು ಆಚರಿಸಲ್ಪಡುತ್ತಿದೆ. ಇದು ದೇಶದ ಎಲ್ಲಾ ನ್ಯಾಯದ ಬೇಡಿಕೆ ಇಡುವ ಪತ್ರಕರ್ತರ ಸಾಮಾಜಿಕ ನ್ಯಾಯಪರ ಹೋರಾಟಗಾರರಿಗೆ ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ ಇಂತಹ ಹೇಯ ಕೃತ್ಯಗಳ ಆರೋಪವನ್ನು ಹೊತ್ತಿರುವ ವ್ಯಕ್ತಿಗಳನ್ನು ವೈಭವೀಕರಿಸದೆ ಗೌರಿ ಲಂಕೇಶ್ ಪ್ರಕರಣದಲ್ಲಿ ನೀಡಿರುವ ಜಾಮೀನನ್ನು ಮರು ಪರಿಶೀಲಿಸಿ ನ್ಯಾಯ ಒದಗಿಸುವಂತೆ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ರವರು ನ್ಯಾಯಾಂಗಕ್ಕೆ ಕರೆ ನೀಡಿದ್ದಾರೆ. ಇಲ್ಲವಾದಲ್ಲಿ ಇಂತಹ ನೀಚ ಕೃತ್ಯಗಳಿಂದ ವಾಕ್ ಸ್ವಾತಂತ್ರಕ್ಕೆ ಅಡ್ಡಿಯಾಗುವುದಲ್ಲದೆ ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಪಡಿಸಬಹುದು. ಆದ್ದರಿಂದ ರಾಜ್ಯ ಸರ್ಕಾರ ಇಂತಹ ನೀಚ ಕೃತ್ಯವೆಸಗಿದ ವ್ಯಕ್ತಿಗಳ ವಿರುದ್ಧ ದೃಢವಾದ ತೀರ್ಮಾನ ಕೈಗೊಳ್ಳಬೇಕು ಹಾಗೂ ಗೌರಿ ಲಂಕೇಶ್ ಜೊತೆ ನಿಲ್ಲುವ ಪ್ರತಿಯೊಬ್ಬರೊಂದಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಕೈ ಜೋಡಿಸಲಿದೆ. ಆದ್ದರಿಂದ ಇಂತಹ ದ್ವೇಷ ಕೃತ್ಯಗಳನ್ನು ನಡೆಸುವವರನ್ನು ಸಮಾಜ ಬಹಿಷ್ಕರಿಸಬೇಕಾಗಿದೆ ಎಂದು ಯಾಸ್ಮಿನ್ ಇಸ್ಲಾಂ ಈ ಮೂಲಕ ಕರೆ ನೀಡಿದ್ದಾರೆ.