ಮೂಡುಬಿದಿರೆ: ಅಂತರ್ ರಾಷ್ಟ್ರೀಯ ಲೇಕ್ ಸಮ್ಮೇಳನಕ್ಕೆ ಚಾಲನೆ

Update: 2024-10-17 17:27 GMT

ಮೂಡುಬಿದಿರೆ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯ ಲಿರುವ 14ನೇ ಅಂತರ್ ರಾಷ್ಟ್ರೀಯ ಲೇಕ್ ಸಮ್ಮೇಳನಕ್ಕೆ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಗುರುವಾರ ಚಾಲನೆ ದೊರೆಯಿತು.

ಸಮ್ಮೇಳನದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ವೃಕ್ಷ ರಕ್ಷ ಆಂದೋಲನದ ರೂವಾರಿ, ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಪರಿಸರವಾದಿ ಅನಂತ ಹೆಗಡೆ ಅಶೀಸರ ಅವರು, ಪಶ್ಚಿಮ ಘಟ್ಟ ಪ್ರದೇಶ ಸಮಗ್ರ ದಕ್ಷಿಣ ಭಾರತದ ಜೀವನಾಧಾರವಾಗಿದೆ. ಇಂದು ನಮ್ಮಲ್ಲಿ ಅತಿವೃಷ್ಠಿ, ಜಲ ಪ್ರಳಯ, ಕೇರಳದ ಭೂಕುಸಿತ, ಉರಿಬಿಸಿಲಿನ ಸಂಕಷ್ಟ, ಒಣ ಭೂಮಿ ನಿಸರ್ಗ ನಿರ್ಲಕ್ಷ್ಯದ ಪರಿಣಾಮಗಳಾಗಿವೆ. ಆದರೂ ಅಲಲ್ಲಿ ನಿರಂತರ ಪರಿಸರಕ್ಕೆ ಮಾರಕವಾಗುವ ಬೆಳವಣಿಗೆಳಿಗೆ ಸರಕಾರವೂ ಹೊಣೆಯಾಗುತ್ತಿದೆ. ಹಸಿರು ಬಜೆಟ್, ಮಲೆನಾಡಿನ ಸುಸ್ತಿರ ಅಭಿವೃದ್ಧಿ ಸಹಿತ ಪಶ್ಚಿಮ ಘಟ್ಟಗಳ ಉಳಿವಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಬೇಕಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಎಸಿಎಫ್ ಆಂಟನಿ ಎಸ್. ಮರಿಯಪ್ಪ ಕೆನಡಾದ ಪರಿಸರ ಚಿಂತಕ ಡಾ.ಸಿ. ರಾಜಶೇಖರ ಮೂರ್ತಿ, ಪರಿಸರವಾದಿ ಡಾ.ಎಂ.ಡಿ. ಸುಭಾಸ್ ಚಂದ್ರನ್ ಮಾತನಾಡಿದರು. ಡಾ.ಹರೀಶ ಕೃಷ್ಣ ಮೂರ್ತಿ , ಬಿಎಂ. ಕೃಷ್ಣ ಮೂರ್ತಿ, ಸಂಘಟನಾ ಕಾರ್ಯದರ್ಶಿ ಡಾ.ಎಸ್. ವಿನಯ್ ಉಪಸ್ಥಿತರಿದ್ದರು.

ಲೇಕ್ ಸಮ್ಮೇಳನ ಅಧ್ಯಕ್ಷ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಅಗಲಿದ ಪರಿಸರ ಪ್ರೇಮಿಗಳಿಗೆ ನುಡಿನಮನ ಸಲ್ಲಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ದತ್ತಾತ್ರೇಯ ವಂದಿಸಿದರು.

ದೇಶದ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರು, ಹಾಗೂ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದು ಐಐಟಿ, ಐಐಎಸ್ಸಿ, ಐಐಐಟಿ ಹಾಗೂ ಎನ್‌ಐಟಿಗಳಿಂದ ಸಂಶೋಧಕರು ಸೇರಿದಂತೆ, ಕೆನಡಾ, ರಷ್ಯಾ, ಸಿಂಗಪೂರ್ ಹಾಗೂ ನೇಪಾಳದವ ರಿಂದ ಪ್ರಬಂಧ ಮಂಡನೆ ನಡೆಯಲಿದೆ. ಮೂರು ದಿನಗಳ ಅವಧಿಯಲ್ಲಿ 11 ತಾಂತ್ರಿಕ ಅಧಿವೇಶನಗಳ ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 7 ಗೋಷ್ಠಿಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News