ಕೈಗಾರಿಕೆಗಳಲ್ಲಿ ಸುರಕ್ಷತೆಗೆ ಸೂಕ್ಷ್ಮ ಯೋಜನೆ ಅಗತ್ಯ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು, ಮಾ.20: ಕೈಗಾರಿಕೆಗಳಲ್ಲಿ ಸುರಕ್ಷತೆಗೆ ಸೂಕ್ಷ್ಮ ಯೋಜನೆ ರೂಪಿಸಲು ಕಂಪೆನಿಗಳು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಸುರಕ್ಷಾ ಸಂಸ್ಥೆ, ಕಂಪನಿ, ಬಾಯ್ಲರ್, ಕೈಗಾರಿಕಾ ಸುರಕ್ಷಾ ಮತ್ತು ಆರೋಗ್ಯ ಇಲಾಖೆ, ರಾಷ್ಟ್ರೀಯ ಸುರಕ್ಷಾ ಕೌನ್ಸಿಲ್ ಕರ್ನಾಟಕ ಚಾಪ್ಟರ್ನ ಮಂಗಳೂರು ಆ್ಯಕ್ಷನ್ ಸೆಂಟರ್ ಇವುಗಳ ಆಶ್ರಯ ದಲ್ಲಿ ನಗರದ ಪುರಭವನದಲ್ಲಿ ಗುರುವಾರ ಆಯೋಜಿಸಲಾದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕಾ ಕ್ರಾಂತಿ ಬಳಿಕ ದೇಶದಲ್ಲಿ ಉದ್ದಿಮೆಗಳಿಗೆ ಸಂಬಂಧಿಸಿ ಕಟ್ಟುನಿಟ್ಟಿನ ನಿಯಮ, ಕಾನೂನು ಜಾರಿಗೆ ಬಂತು. ಕೈಗಾರಿಕೆಗಳು ವ್ಯಕ್ತಿಗತವಾಗಿಯೂ ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ಸುರಕ್ಷತೆಯು ಅಂತರ್ರಾಷ್ಟ್ರೀಯ ಮಾನದಂಡವನ್ನು ಹೊಂದಿರುತ್ತದೆ. ಕೈಗಾರಿಕೆಗಳಲ್ಲಿ ಗರಿಷ್ಠ ಸುರಕ್ಷಾ ವ್ಯವಸ್ಥೆಯಿದ್ದರೆ ಸಮಾಜಕ್ಕೆ ಹಿತವಾಗಿತ್ತದೆ. ಕೈಗಾರಿಕಾ ಅಪಘಾತಗಳು ಸಂಭವಿಸಿದಾಗ ಇತರರಿಗೂ ನೆರವಿನ ಹಸ್ತ ಚಾಚಬೇಕು, ನಮ್ಮಲ್ಲಿ ಸೌಲಭ್ಯವನ್ನು ಇತರರಿಂದ ಪಡೆಯಬೇಕು ಎಂದರು.
ಉದ್ಯೋಗದಲ್ಲಿ ಬದಲಾವಣೆ ಕಡಿಮೆ: ಸಾಮಾನ್ಯವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಐಟಿ ಉದ್ಯೋಗದಂತೆ ಪದೇ ಪದೇ ಉದ್ಯೋಗ ಬದಲಾವಣೆಗೆ ಮಾಡುವುದಿಲ್ಲ ಎಂದು ನುಡಿದರು.
ಮಂಗಳೂರು ವಲಯದ ಅಗ್ನಿಶಾಮಕದಳ ಮುಖ್ಯ ಅಧಿಕಾರಿ ತಿರುಮಲೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ, ದೇಶದ ಕೈಗಾರಿಕೆಗಳಲ್ಲಿ 2 ಮಿ ಲಿಯನ್ ಉದ್ಯೋಗಿಗಳಿದ್ದು, ದೇಶದ ಆದಾಯದಲ್ಲಿ ಶೇ.7ರಷ್ಟು ಕೈಗಾರಿಕೆಗಳಿಂದ ದೊರಕುತ್ತಿದೆ. ಹೀಗಿರುವಾಗ ಕೈಗಾರಿಕೆಗಳಲ್ಲಿ ಹಾಗೂ ಉದ್ಯೋಗಿಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.
ಕೈಗಾರಿಕೆಗಳಲ್ಲಿ ಸುರಕ್ಷತೆಗೆ ಅತ್ಯಾಧುನಿಕ ತಾಂತ್ರಿಕತೆ ಇರಬೇಕು. ಹೆಚ್ಚಿನ ಸುರಕ್ಷತೆಯನ್ನು ಹೊಂದಿ ದಾಗ ಯಾವುದೇ ಅವಘಡ ಸಂಭವಿಸಲು ಸಾಧ್ಯವಿಲ್ಲ. ಕೇವಲ ತರಬೇತಿ ಮಾತ್ರ ಹೊಂದಿದ್ದರೆ ಸಾಲದು, ಸುರಕ್ಷತೆ ಕಡೆಗೆ ಸಾಕಷ್ಟು ಗಮನ ಇರಬೇಕು ಎಂದರು.
ಕೈಗಾರಿಕಾ ಅವಘಡಗಳ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ಬಹಮಾನ ವಿತರಿಸಲಾಯಿತು. 2024 ಡಿಸೆಂಬರ್ನಲ್ಲಿ ಉಳ್ಳಾಲದಲ್ಲಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ಅವಘಡದಲ್ಲಿ ಗ್ಯಾಸ್ ಸೋರಿಕೆ ಶಮನಕ್ಕೆ ಶ್ರಮಿಸಿದ ವಿವಿಧ ಕೈಗಾರಿಕಾ ಕಂಪೆನಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು.
ಎಂಆರ್ಪಿಎಲ್ ರಿಫೈನರಿ ನಿರ್ದೇಶಕ ನಂದಕುಮಾರ್ ವೇಲಾಯುಧನ್ ಪಿಳ್ಳೆ ಶುಭ ಹಾರೈಸಿದರು.
ಕಂಪನಿ, ಬಾಯ್ಲರ್, ಕೈಗಾರಿಕಾ ಸುರಕ್ಷಾ ಇಲಾಖೆ ಮಂಗಳೂರಿನ ಉಪ ನಿರ್ದೇಶಕ ಮಹಾದೇವ್
ಸ್ವಾಗತಿಸಿ, ವಂದಿಸಿದರು. ಗುರುಪ್ರಸಾದ್ ಮತ್ತು ಸೋನಿಕಾ ನಿರೂಪಿಸಿದರು.