ಕೊಣಾಜೆ: ದೋಷಪೂರಿತ ಲ್ಯಾಪ್‌ಟಾಪ್‌; ಬಡ್ಡಿ ಸಹಿತ ಖರೀದಿ ಮೌಲ್ಯ, ವ್ಯಾಜ್ಯ ಮೊತ್ತ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

Update: 2025-04-04 17:34 IST
ಕೊಣಾಜೆ: ದೋಷಪೂರಿತ ಲ್ಯಾಪ್‌ಟಾಪ್‌; ಬಡ್ಡಿ ಸಹಿತ ಖರೀದಿ ಮೌಲ್ಯ, ವ್ಯಾಜ್ಯ ಮೊತ್ತ ನೀಡಲು ಗ್ರಾಹಕ ನ್ಯಾಯಾಲಯ ಆದೇಶ
  • whatsapp icon

ಕೊಣಾಜೆ: ವೈದ್ಯರೊಬ್ಬರು ಖರೀದಿಸಿದ ಲ್ಯಾಪ್‌ಟಾಪ್‌ನಲ್ಲಿ ದೋಷ ಕಂಡುಬಂದರೂ ಸೂಕ್ತವಾಗಿ ಸ್ಪಂದಿಸದ ಲ್ಯಾಪ್‌ಟಾಪ್‌ ತಯಾರಿ ಕಂಪನಿಗೆ ಉತ್ಪನ್ನದ ಖರೀದಿ ಮೌಲ್ಯವನ್ನು ಶೇ.6ರ ಬಡ್ಡಿದರ ಸಹಿತ 45 ದಿನಗಳೊಳಗೆ ಹಿಂತಿರುಗಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

ತಪ್ಪಿದಲ್ಲಿ ಕಂಪನಿ ಮೇಲೆ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಉಳ್ಳಾಲ ತಾಲೂಕು ಮುಡಿಪಿನ ವೈದ್ಯ ಡಾ.ಅರುಣ್‌ ಪ್ರಸಾದ್‌ ಏಸುಸ್‌ ಕಂಪನಿಯ 1,09,990 ರೂ. ಮೌಲ್ಯದ ಲ್ಯಾಪ್‌ಟಾಪ್‌ ಖರೀದಿಸಿದ್ದರು. ಇದಕ್ಕೆ ಒಂದು ವರ್ಷದ ವಾರಂಟಿ ಜೊತೆಗೆ ರೂ. 3498 ಮೌಲ್ಯದ ಎಕ್ಸ್‌ಟೆಂಡೆಡ್‌ ವಾರಂಟಿ ಪಡೆದಿದ್ದರು. ಖರೀದಿಸಿದ 6 ತಿಂಗಳಿನೊಳಗೆ ಲ್ಯಾಪ್‌ಟಾಪ್‌ನಲ್ಲಿ ನಿರಂತರ ತಾಂತ್ರಿಕ ದೋಷ, ಎಲ್‌ಸಿಡಿ ಮಾನಿಟರ್‌ ಗಾಜು ಒಡೆಯುವುದು ಮತ್ತಿತರ ಸಮಸ್ಯೆಗಳು ಕಂಡುಬಂದವು. ಸಂಬಂಧಿಸಿದ ಸಂಸ್ಥೆಯವರಿಗೆ ದೂರವಾಣಿ, ಇಮೇಲ್‌, ಟ್ವೀಟ್‌ ಮತ್ತಿತರ ಮಾಧ್ಯಮಗಳ ಮೂಲಕ ಸಾಕಷ್ಟು ಬಾರಿ ದೂರು ಸಲ್ಲಿಸಿದರು. ಆದರೂ, ಲ್ಯಾಪ್‌ಟಾಪ್‌ ರಿಪೇರಿ, ಖರೀದಿಸಿದ ಮೌಲ್ಯ ಹಿಂತಿರುಗಿಸಲು ಕಂಪನಿ ಮುಂದಾಗಲಿಲ್ಲ.

ದೂರುದಾರರ ಟ್ವಿಟ್ಟರ್ ಅಕೌಂಟ್‌ನ್ನು ಕಂಪನಿ ಬ್ಲಾಕ್ ಮಾಡಿತು. ಇದರಿಂದ ರೋಸಿದ ವೈದ್ಯ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ದೂರುದಾರರು ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಂತರ ವಾದ ಆಲಿಸಿದ ಗ್ರಾಹಕ ನ್ಯಾಯಾಲಯ ಸದ್ರಿ ಲ್ಯಾಪ್‌ಟಾಪ್‌ನಲ್ಲಿ ತಯಾರಿಕಾ ದೋಷ ಇದೆ ಎಂಬ ದೂರುದಾರರ ವಾದ ಎತ್ತಿ ಹಿಡಿದಿದೆ. ಲ್ಯಾಪ್‌ಟಾಪ್‌ ಖರೀದಿಸಿದ ಮೌಲ್ಯ1,09,990 ರೂ. ಮತ್ತು ಶೇ.6ರ ಬಡ್ಡಿ ದರದಲ್ಲಿ 45 ದಿನಗಳೊಳಗಾಗಿ ಹಿಂತಿರುಗಿಸುವಂತೆ ಆದೇಶ ನೀಡಿದೆ. ಪ್ರತಿವಾದಿಗಳು ದೂರುದಾರರಿಗೆ ಸೇವಾ ನ್ಯೂನತೆ, ಮಾನಸಿಕ ತೊಂದರೆಗಾಗಿ 30 ಸಾವಿರ ರೂ. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 10 ಸಾವಿರ ರು.ನೀಡಲು ಆದೇಶ ನೀಡಿದೆ. ತಪ್ಪಿದಲ್ಲಿ ಕಂಪನಿಯ ಮೇಲೆ ಸಿವಿಲ್‌ ಮತ್ತು ಕ್ರಿಮಿನಲ್ ಮುಖದ್ದಮೆ ದಾಖಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ದೂರುದಾರರ ಪರವಾಗಿ ಮಂಗಳೂರಿನ ಅಪೆಕ್ಸ್ ಜ್ಯೂರಿಸ್ ನ್ಯಾಯವಾದಿ ಅರವಿಂದ ವಿ. ವಾದಿಸಿದರು. ಸುಳ್ಯದ ಶಾಂತಿ ಇನ್ಫೋಟೆಕ್‌ನ ಪ್ರಶಾಂತ ಎಸ್‌ಟಿ ತಜ್ಞರ ಅಭಿಮತ ನೀಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News