ಕುತ್ಲೂರು ಶಾಲೆಗೆ ಸಿಎಂ ಸಿದ್ದರಾಮಯ್ಯ ಕಂಪ್ಯೂಟರ್, ಪ್ರೊಜೆಕ್ಟರ್ ಕೊಡುಗೆ

ಮಂಗಳೂರು, ಎ.6: ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿ ತಮ್ಮ ಕಲಿಕೆಯ ಭಾಗವಾಗಿ ತಾವೇ ಬೆಳೆಸಿದ ತರಕಾರಿ ಬೆಳೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಿವಾರ ಕಾವೇರಿ ನಿವಾಸದಲ್ಲಿ ನೀಡಿ ಸಂಭ್ರಮಿಸಿದರು.
ಮುಖ್ಯಮಂತ್ರಿಗಳು ಮಕ್ಕಳನ್ನು ಶ್ಲಾಘಿಸಿ ಶಾಲೆಗೆ ಎರಡು ಕಂಪ್ಯೂಟರ್ ಗಳನ್ಮು ಹಾಗೂ ಪ್ರೊಜೆಕ್ಟರ್ ಉಡುಗೊರೆಯಾಗಿ ನೀಡಿದರು.
ಶಾಲೆಯ ಶಿಕ್ಷಕ ವೃಂದ ಮಕ್ಕಳ ಜೊತೆಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ 2018 ಡಿಸೆಂಬರ್ 23 ರಂದು ಕುತ್ಲೂರು ಸರಕಾರಿ ಶಾಲೆಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಳೆದ ವಾರ ಕುತ್ಲ್ಲೂರು ಸರಕಾರಿ ಶಾಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಶಾಲೆಗೆ ಎರಡು ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್ ನೀಡುವುದಾಗಿ ಭರವಸೆ ನೀಡಿದ್ದರು. ಕೂಡಲೇ ಸ್ಪಂದಿಸಿ ಸರಕಾರಿ ಶಾಲೆಯ ಮಕ್ಕಳ ಬಹು ದಿನದ ಬೇಡಿಕೆ ಈಡೇರಿಸಿದ್ದಾರೆ.