ಅಡಿಕೆ ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ: ಡಿಸಿ ಮುಲ್ಲೈ ಮುಗಿಲನ್

Update: 2024-08-13 15:40 GMT

ಮಂಗಳೂರು: ಅಡಿಕೆ ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ರೈತ ಮುಖಂಡರೊಂದಿಗೆ ನಡೆದ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡಿಕೆಗೆ ಬೆಂಬಲ ಬೆಲೆ ನೀಡಬೇಕೆಂದು ರೈತರಿಂದ ಒತ್ತಾಯ ಇದೆ. ಈ ಬಗ್ಗೆ ಪರಿಶೀಲಿಸಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು.

ಬೆಳೆಗಳ ರಕ್ಷಣೆಗೆ ರೈತರಿಗೆ ನೀಡುವ ಕೋವಿ ಪರವಾನಿಗೆಯನ್ನು ಸರಳೀಕರಣ ಮಾಡಲು ಪ್ರಯತ್ನಿಸಲಾಗುವುದು. ತಂದೆ ಮರಣದ ನಂತರ ಮಗನಿಗೆ ಕೋವಿ ಪರವಾನಿಗೆಯನ್ನು ಹಸ್ತಾಂತರಿಸುವ ಬಗ್ಗೆ ಗೊಂದಲಗಳನ್ನು ಸರಿಪಡಿಸಲಾಗುವುದು. ಕೋವಿ ಪರವಾನಿಗೆ ಅರ್ಜಿಗಳ ತ್ವರಿತ ವಿಲೇವಾರಿಗೆ ಕೆಳ ಕಚೇರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೈತರ ಜಮೀನುಗಳ ದಾಖಲೆಗಳ ಗೊಂದಲ ತಪ್ಪಿಸಲು ಪೋಡಿ ಮುಕ್ತ ಅಭಿಯಾನ ನಡೆಸಲಾಗುತ್ತಿದ್ದು, ಇದಕ್ಕೆ ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಂಗ, ನವಿಲುಗಳ ಪಾರ್ಕ್: ಮಂಗ ಮತ್ತು ನವಿಲುಗಳ ದಾಳಿಯಿಂದ ಬೆಳೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಮಂಗ ಮತ್ತು ನವಿಲುಗಳ ಪ್ರತ್ಯೇಕ ಪಾರ್ಕ್ ಮಾಡುವ ಬಗ್ಗೆ ಪರಿಶೀಲಿಸಲಾಗುವುದು.ಪ್ರಾಣಿಗಳ ಹಾವಳಿಯಿಂದ ತೆಂಗು ಅಡಿಕೆ ಹಾನಿಯಾದಲ್ಲಿ ಪರಿಹಾರವನ್ನು ನೀಡುವ ಯಾವುದೇ ಯೋಜನೆಗಳಿಲ್ಲ.ಆದರೆ ಮರಗಳು ಹಾನಿಯಾದಲ್ಲಿ ಪರಿಹಾರಗಳನ್ನು ನೀಡಲಾಗುತ್ತದೆ ಎಂದರು.

ವಿದ್ಯುತ್ ಪ್ರಸರಣ ಮಾರ್ಗವನ್ನು ಸ್ಥಾಪಿಸಲು ರೈತರ ಜಮೀನುಗಳನ್ನು ಅಗೆಯುವಂತ ಕೆಲಸವಾಗುತ್ತಿದ್ದು, ಇದರಿಂದ ರೈತರಿಗೆ ನಷ್ಟ್ಟವಾಗುತ್ತಿದೆ. ಕಾನೂನು ಬಾಹಿರವಾಗಿ ಖಾಸಗಿ ಕಂಪನಿಯವರು ಇಂಥ ಕೆಲಸವನ್ನು ನಡೆಸುತ್ತಿದ್ದಾರೆ ಎಂದು ಎಂದು ರೈತ ಮುಖಂಡರು ತಿಳಿಸಿದರು. ಜಿಲ್ಲಾಧಿಕಾರಿಯವರು ಮಾತನಾಡಿ, ವಿದ್ಯುತ್ ಪ್ರಸರಣ ಮಾರ್ಗಗಳನ್ನು ಅಗೆಯು ವುದು ಕಾನೂನು ಬಾಹಿರವಲ್ಲ. ಇದು ಸರ್ಕಾರದ ಒಂದು ಕೆಲಸವಾಗಿದೆ.ಇದರ ಬಗ್ಗೆ ಮಾಲಿಕತ್ವ ಹೊಂದಿರುವ ಕಂಪನಿಯವರನ್ನು ಕರೆದು ರೈತ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತದೆಎಂದರು.

ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿರೈತ ಮುಖಂಡರೊಂದಿಗೆ ಸಭೆ ನಡೆಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ತುಂಬೆ ಡ್ಯಾಮ್ ಬಳಿ ಸವೆದು ಹೋಗಿರುವ ಪ್ರದೇಶಗಳಿಗೆ ಈಗಾಗಲೇ ಸರಕಾರದಿಂದ ಪರಿಹಾರ ಮಂಜೂರು ಮಾಡಿ ದರೂ, ವಿತರಿಸಿಲ್ಲ. ಸಂತ್ರಸ್ತರಿಗೆ ಈವರೆಗೆ ಪರಿಹಾರ ಮೊತ್ತ ಸಿಗದೆ ಪ್ರತಿ ದಿನ ಅಲೆಯುತ್ತಿದ್ದಾರೆ ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತಿಳಿಸಿದರು. ಇನ್ನುಎರಡು ದಿನಗಳಲ್ಲಿ ಪರಿಹಾರಧನ ವಿತರಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಡಾ.ಆನಂದ್ ಕೆ,ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಮರಿಯಪ್ಪ, ಸೈಬರ್‌ಕ್ರೈಮ್ ಡಿಎಸ್ಪಿ ಮಂಜುನಾಥ್, ಮಂಗಳೂರು ಉಪವಿಭಾಗಾಧಿಕಾರಿ ಹಷರ್ವರ್ಧನ್,ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಭಂದಿ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News