ಪುತ್ತೂರು: ಮಹಿಳೆಯರಿಬ್ಬರಿಗೆ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ

Update: 2023-08-23 06:03 GMT

ಪುತ್ತೂರು: ಮಹಿಳೆಯರಿಬ್ಬರಿಗೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಮೂಲೆತ್ತಂಡ ಎಂಬಲ್ಲಿ ಮಂಗಳವಾರ ನಡೆದಿದ್ದು, ಗಂಭೀರ ಗಾಯಗೊಂಡ ಮಹಿಳೆಯರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲೆತ್ತಂಡ ಎಂಬಲ್ಲಿನ ಮನೆಯ ಯಜಮಾನಿ ಸುರೇಖಾ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗೋಳಿತ್ತೊಟ್ಟು ನಿವಾಸಿ ಗಿರಿಜಾ ಹಲ್ಲೆಗೊಳಗಾದವರು. ಸುರೇಖಾ ಅವರ ಸಂಬಂಧಿ ಸುಳ್ಯ ಮೂಲದ ಸುರೇಶ ನಾಯ್ಕ ಈ ಹಲ್ಲೆ ನಡೆಸಿದ ಆರೋಪಿ.

ಆರೋಪಿಯು ಸಮೀಪದ ಗುಡ್ಡೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಯ ಕೆಲಸದಾಕೆ ಗಿರಿಜಾ ಅವರಿಗೆ ಆರಂಭದಲ್ಲಿ ಹಲ್ಲೆ ನಡೆಸಿದ್ದು, ಬಳಿಕ ಮನೆಯೊಡತಿಯಾದ ಸುರೇಶ್ ನಾಯ್ಕ ಅವರ ಚಿಕ್ಕಮ್ಮ ಸುರೇಖಾ ಅವರನ್ನು ಗಿರಿಜಾ ಅವರಿಗೆ ಏನೋ ಅಪಾಯವಾಗಿದೆ ಎಂದು ಗುಡ್ಡೆಗೆ ಕರೆದೊಯ್ದಿದ್ದಾನೆ. ಬಳಿಕ ಅವರಿಗೂ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಮಹಿಳೆಯರನ್ನು ಈಶ್ವರಮಂಗಲದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುರೇಖ ಅವರು ಮಗನ ಜೊತೆ ವಾಸವಿದ್ದು, ಹೊಸ ಮನೆ ನಿರ್ಮಾಣದ ಕೆಲಸ ನಡೆಯುತ್ತಿದೆ. ಗಿರಿಜಾ ಅವರು ಸುರೇಖಾ ಅವರ ಮನೆಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದರು. ಸುರೇಖಾ ಅವರ ಸಂಬಂಧಿಯೂ ಆಗಿರುವ ಹಲ್ಲೆ ಮಾಡಿದ ಆರೋಪಿ ಸುರೇಶ ನಾಯ್ಕ ಕೆಲವು ಸಮಯಗಳಿಂದ ಸುರೇಖ ಅವರ ಮನೆಯಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.

ಸ್ಥಳೀಯ ನಿವಾಸಿಗಳು ಮಹಿಳೆಯರು ಗುಡ್ಡದಲ್ಲಿ ಬಿದ್ದಿರುವುದನ್ನು ಸುರೇಖಾ ಅವರ ಮಗನಿಗೆ ತಿಳಿಸಿದ್ದು, ಅವರು ಆಗಮಿಸಿ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಈತ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News