ಅಸ್ಸಾಂ: ಮಾಟಗಾತಿ ಎಂಬ ಶಂಕೆಯಿಂದ ಆದಿವಾಸಿ ಮಹಿಳೆಯ ಸಜೀವ ದಹನ

Update: 2023-12-25 15:31 GMT

ಸಾಂದರ್ಭಿಕ ಚಿತ್ರ 

ಗುವಾಹಟಿ: ಆದಿವಾಸಿ ಮಹಿಳೆಯೋರ್ವಳನ್ನು ಮಾಟಗಾತಿ ಎಂದು ಶಂಕಿಸಿ ಗುಂಪೊಂದು ಸಜೀವ ದಹನಗೊಳಿಸಿದ ಘಟನೆ ರವಿವಾರ ಉತ್ತರ ಅಸ್ಸಾಮಿನ ಸೋನಿತಪುರ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆ ಸಂಗೀತಾ ಕಪಿ ಮೂವರು ಮಕ್ಕಳ ತಾಯಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಆರು ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಮಹಿಳೆಯ ಪತಿ ರಾಮ ಕಪಿ, “ನನ್ನ ಪತ್ನಿ ಅಡುಗೆ ಮಾಡುತ್ತಿದ್ದಾಗ ಮನೆಯೊಳಗೆ ನುಗ್ಗಿದ ಗುಂಪು ಆಕೆ ಮಾಟಗಾತಿಯಾಗಿದ್ದಾಳೆ ಎಂದು ಆರೋಪಿಸಿ ಥಳಿಸಿದ್ದರು. ಆಕೆಯನ್ನು ಥಳಿಸದಂತೆ ಮತ್ತು ಬೆಳಿಗ್ಗೆ ಬರುವಂತೆ ನಾನು ಅವರನ್ನು ಕೋರಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ, ನನ್ನನ್ನೂ ಥಳಿಸಿದರು. ಇದನ್ನು ಕಂಡು ನನ್ನ ಮೂವರು ಮಕ್ಕಳು ಅಳತೊಡಗಿದಾಗ ಅವರನ್ನು ಸಮೀಪದಲ್ಲಿರುವ ನನ್ನ ಸೋದರನ ಮನೆಯಲ್ಲಿ ಬಿಡಲು ಕರೆದೊಯ್ದಿದ್ದೆ. ನಾನು ವಾಪಸಾದಾಗ ಮನೆ ಬೆಂಕಿಯಲ್ಲಿ ಉರಿಯುತ್ತಿತ್ತು. ನನ್ನ ಪತ್ನಿ ಸಜೀವ ದಹನಗೊಂಡಿದ್ದಳು’ ಎಂದು ಆರೋಪಿಸಿದರು.

ನಾವು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೋಲಿಸರು ತಿಳಿಸಿದರು.

ಸಾಮಾಜಿಕ ಪಿಡುಗಾಗಿರುವ ವಾಮಾಚಾರಿಗಳ ಬೇಟೆ ಅಸ್ಸಾಮಿನಲ್ಲಿ ಸಾಮಾನ್ಯವಾಗಿದೆ. ರಾಜ್ಯ ಸರಕಾರ, ಎನ್ಜಿಒಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಾಮೂಹಿಕ ಜಾಗೃತಿ ಅಭಿಯಾನಗಳನ್ನು ನಡೆಸಿದ್ದರೂ ಹತ್ಯೆಗಳು ನಿಂತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News