ಒಳ ಮೀಸಲಾತಿ ತೀರ್ಪು ವಿರೋಧಿಸಿ ಭಾರತ್ ಬಂದ್ | ಭಾರತದಾದ್ಯಂತ ಮಿಶ್ರ ಪ್ರತಿಕ್ರಿಯೆ

Update: 2024-08-21 09:20 GMT

Photo: ANI

ಹೊಸದಿಲ್ಲಿ : ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ವಿರೋಧಿಸಿ ಹಲವು ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ದೇಶಾದ್ಯಂತ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವೆಡೆ ಗಮನಾರ್ಹ ಅಡೆತಡೆಗಳನ್ನು ಕಂಡು ಬಂದರೆ, ಇತರೆಡೆ ಪರಿಣಾಮ ಬೀರಲಿಲ್ಲ. ವಿವಿಧ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳಿಂದ ಬಂದ್‌ಗೆ ಮಿಶ್ರ ಬೆಂಬಲ ವ್ಯಕ್ತವಾಗಿದೆ.

ಜಾರ್ಖಂಡ್‌ನಲ್ಲಿ, ಸಾರ್ವಜನಿಕ ಸಾರಿಗೆ ಬಸ್‌ಗಳು ರಸ್ತೆಯಿಂದ ಹೊರಗುಳಿದವು. ರಾಜ್ಯದ ರಾಜಧಾನಿ ರಾಂಚಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಶಾಲೆಗಳು ಮುಚ್ಚಲ್ಪಟ್ಟವು. ಮುಷ್ಕರದಿಂದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಪಲಾಮು ಭೇಟಿಯನ್ನು ರದ್ದುಗೊಳಿಸಿದರು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಳಗೊಂಡ ರಾಜ್ಯದ ಆಡಳಿತ ಮೈತ್ರಿಕೂಟವು ಎಡಪಕ್ಷಗಳೊಂದಿಗೆ ಬಂದ್‌ಗೆ ಬೆಂಬಲ ನೀಡಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಎಂದಿನಂತೆ ಕೆಲವೆಡೆ ವ್ಯಾಪಾರ ವಹಿವಾಟು ಮುಂದುವರೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಮಧ್ಯಪ್ರದೇಶದಲ್ಲಿ, ಬಂದ್ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಗೃಹ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿತ್ತು. ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿದರು. ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಂದ್‌ನ ಒಟ್ಟಾರೆ ಪರಿಣಾಮವು ಕಡಿಮೆಯಾಗಿತ್ತು.

ಒಡಿಶಾ ರೈಲು ಮತ್ತು ರಸ್ತೆ ಸೇವೆಗಳಲ್ಲಿ ಭಾಗಶಃ ಅಡೆತಡೆಗಳನ್ನು ಕಂಡಿತು. ಪ್ರತಿಭಟನಾಕಾರರು ಭುವನೇಶ್ವರ ಮತ್ತು ಸಂಬಲ್‌ಪುರದಲ್ಲಿ ರೈಲುಗಳನ್ನು ತಡೆದರು. ಬಸ್‌ಗಳು ಹಲವಾರು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು. ಈ ಅಡಚಣೆಗಳ ನಡುವೆಯೂ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಾಜ್ಯದಾದ್ಯಂತ ವಿಶೇಷವಾಗಿ ಸೆಕ್ರೆಟರಿಯೇಟ್ ಮತ್ತು ಇತರ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಬಿಹಾರದಲ್ಲಿ ಬಂದ್‌ನಿಂದಾಗಿ ಕೆಲ ಜಿಲ್ಲೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಜೆಹಾನಾಬಾದ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ-83 ಅನ್ನು ತಡೆಯಲು ಯತ್ನಿಸಿದ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಮಾಧೇಪುರ ಮತ್ತು ಮುಜಾಫರ್‌ಪುರದಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ತ್ವರಿತವಾಗಿ ಚದುರಿಸಿದವು. ಈ ಮಧ್ಯೆ ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಾತಿ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ಮುಂದುವರೆದವು. ರಾಜ್ಯ ಸರ್ಕಾರವು ಅಭ್ಯರ್ಥಿಗಳಿಗೆ ಸುಗಮ ಸಾರಿಗೆ ಸೌಲಭ್ಯ ಒದಗಿಸಿತು.

ರಾಜಸ್ಥಾನದಲ್ಲಿ, ಕೆಲವು ಜಿಲ್ಲೆಗಳು ಸಂಪೂರ್ಣವಾಗಿ ಬಂದ್ ಗೆ ಬೆಂಬಲ ನೀಡಿದವು. ಇತರ ಜಿಲ್ಲೆಗಳು ಭಾಗಶಃ ಪರಿಣಾಮವನ್ನು ಮಾತ್ರ ಕಂಡವು, ಅಗತ್ಯ ಸೇವೆಗಳು ಹೆಚ್ಚಾಗಿ ಅಡೆತಡೆಯಿಲ್ಲದೆ ಮುಂದುವರಿದವು. ಜೈಪುರದಲ್ಲಿ ಎಸ್‌ಸಿ ಎಸ್‌ಟಿ ಸಂಯುಕ್ತ ಸಂಘರ್ಷ ಸಮಿತಿಯ ರ್ಯಾಲಿ ನಡೆಯಿತು.

ಮೀಸಲಾತಿ ನೀಡುವುದಕ್ಕಾಗಿ ಎಸ್‌ಸಿ ಮತ್ತು ಎಸ್‌ಟಿಗಳಲ್ಲಿ ಉಪವರ್ಗೀಕರಣ ಮಾಡಲು ರಾಜ್ಯಗಳಿಗೆ ಅಧಿಕಾರ ನೀಡಿದ ಸುಪ್ರೀಂ ಕೋರ್ಟ್‌ನ ಆಗಸ್ಟ್ 1 ರ ತೀರ್ಪಿಗೆ ಪ್ರತಿಕ್ರಿಯೆಯಾಗಿ ದೇಶಾದ್ಯಂತ 21 ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಈ ತೀರ್ಪು ಮೀಸಲಾತಿಯ ಮೂಲ ತತ್ವಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಸಂಘಟನೆಗಳು ಆರೋಪಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News