ಮುಂದಿನ ಮೂರು ಗಣರಾಜ್ಯೋತ್ಸವ ಪರೇಡ್ ಗಳಲ್ಲಿ ಎಲ್ಲ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಸಮಾನ ಅವಕಾಶ: ಆಯ್ಕೆ ಸಮಿತಿ ಸ್ಪಷ್ಟನೆ

Update: 2024-01-11 14:50 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ರಕ್ಷಣಾ ಸಚಿವಾಲಯ ಮತ್ತು ಸಂಬಂಧಿತ ಸರಕಾರಗಳ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ ದಿಲ್ಲಿಯ ಕರ್ತವ್ಯಪಥದಲ್ಲಿ ಮುಂದಿನ ಮೂರು ಗಣರಾಜ್ಯೋತ್ಸವಗಳಲ್ಲಿ ತಮ್ಮ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಮಾನ ಅವಕಾಶವನ್ನು ಪಡೆಯಲಿವೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ತವ್ಯಪಥದಲ್ಲಿ ಈ ವರ್ಷದ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲಿರುವ ಮೂರು ಸಶಸ್ತ್ರ ಪಡೆಗಳು ಮತ್ತು ಇತರ ಸಮವಸ್ತ್ರಧಾರಿ ಪಡೆಗಳ ತಂಡಗಳಲ್ಲಿ ಶೇ.75ರವರೆಗೆ ಮಹಿಳೆಯರು ಇರಲಿದ್ದಾರೆ ಎಂದು ಅವರು ತಿಳಿಸಿದರು.

ತಮ್ಮ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿರುವ ಕುರಿತು ಕರ್ನಾಟಕ, ದಿಲ್ಲಿ ಮತ್ತು ಪಂಜಾಬ್ ಸೇರಿದಂತೆ ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಂದ ಟೀಕೆಗಳ ನಡುವೆಯೇ ಸ್ತಬ್ಧಚಿತ್ರಗಳಿಗಾಗಿ ನೂತನ ಆಯ್ಕೆ ಪ್ರಕ್ರಿಯೆಯ ಕುರಿತು ಸ್ಪಷ್ಟನೆ ಹೊರಬಿದ್ದಿದೆ.

ಕಳೆದ ವರ್ಷ ಸ್ತಬ್ಧಚಿತ್ರಗಳ ಆಯ್ಕೆಗಾಗಿ ರಕ್ಷಣಾ ಕಾರ್ಯದರ್ಶಿ ಗಿರಿಧರ ಅರಮನೆ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳ ನಡುವೆ ಸಮಾಲೋಚನೆಯ ಬಳಿಕ ಗಣರಾಜ್ಯೋತ್ಸವ ದಿನದಂದು ಸ್ತಬ್ಧಚಿತ್ರಗಳ ಪ್ರದರ್ಶನಕ್ಕಾಗಿ ಮೂರು ವರ್ಷಗಳ ರೋಲಿಂಗ್ ಪ್ಲಾನ್ ಗೆ ಚಾಲನೆ ನೀಡಲಾಗಿತ್ತು. ತಜ್ಞರ ಸಮಿತಿಯ ನಾಲ್ಕು ಸುತ್ತುಗಳ ಸಭೆಗಳ ಬಳಿಕ ಜ.26ರಂದು ಗಣರಾಜ್ಯೋತ್ಸವ ಆಚರಣೆಯಲ್ಲಿ ಪ್ರದರ್ಶನಕ್ಕಾಗಿ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳನ್ನು ಆಯ್ಕೆಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ಒದಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಈವರೆಗೆ ಕರ್ನಾಟಕ ಸೇರಿದಂತೆ 28 ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಗುಜರಾತ್, ಉತ್ತರ ಪ್ರದೇಶ, ಛತ್ತೀಸ್ ಗಡ, ಹರ್ಯಾಣ, ಮಧ್ಯಪ್ರದೇಶ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಲಡಾಖ್, ಮಣಿಪುರ, ಮೇಘಾಲಯ, ಒಡಿಶಾ ಮತ್ತು ತೆಲಂಗಾಣ ಈ ವರ್ಷದ ಗಣರಾಜ್ಯೋತ್ಸವದಲ್ಲಿ ತಮ್ಮ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಿವೆ. ಜಮ್ಮು-ಕಾಶ್ಮೀರ, ಕರ್ನಾಟಕ ,ಹಿಮಾಚಲ ಪ್ರದೇಶ, ತ್ರಿಪುರಾ, ಗೋವಾ, ಅಸ್ಸಾಂ ಮತ್ತು ಉತ್ತರಾಖಂಡಗಳು ಜ.23ರಿಂದ 31ರವರೆಗೆ ಕೆಂಪುಕೋಟೆಯಲ್ಲಿ ನಡೆಯಲಿರುವ ‘ಭಾರತ ಪರ್ವ್(ಸಾಂಸ್ಕೃತಿಕ ಉತ್ಸವ)’ನಲ್ಲಿ ಭಾಗವಹಿಸಲಿವೆ.

ಒಪ್ಪಂದದ ನಿಬಂಧನೆಗಳಡಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಆವರ್ತನ ಆಧಾರದಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ತನ್ನ ಸ್ತಬ್ಧಚಿತ್ರದ ಪ್ರದರ್ಶನಕ್ಕೆ ಅವಕಾಶ ಪಡೆಯುವಂತೆ ಮೂರು ವರ್ಷಗಳ ಯೋಜನೆಯನ್ನು ಅಂತಿಮಗೊಳಿಸಲಾಗಿದೆ. ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಶಿಫಾರಸು ಮಾಡಿದ ಹೆಸರಾಂತ ಕಲಾವಿದರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News