ಗುಜರಾತ್‌ ಬಿಜೆಪಿಯಲ್ಲಿ ಭಿನ್ನಮತ: ಯಾವುದೇ ದೂರಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡದಂತೆ ಶಾಸಕರಿಗೆ ಬಿಜೆಪಿ ತಾಕೀತು

Update: 2024-05-22 07:32 GMT

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್‌: ಲೋಕಸಭಾ ಚುನಾವಣೆಯ ನಂತರ ಗುಜರಾತ್‌ನಲ್ಲಿ ಬಿಜೆಪಿಯ ಕೆಲ ನಾಯಕರು ತಮ್ಮದೇ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಾರ್ಯಾಚರಿಸುತ್ತಿದ್ದಾರೆಂಬ ವರದಿಗಳ ನಡುವೆ ಹಲವು ಬಿಜೆಪಿ ಶಾಸಕರು ಪತ್ರಗಳ ಮೂಲಕ ಸರ್ಕಾರದ ಕಾರ್ಯನಿರ್ವಹಣೆಯನ್ನು ಟೀಕಿಸಲಾರಂಭಿಸಿರುವುದು ಬಿಜೆಪಿಗೆ ತಲೆನೋವು ಸೃಷ್ಟಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಅವುಗಳನ್ನು ವೈರಲ್‌ ಮಾಡದಂತೆ ಪಕ್ಷದ ನಾಯಕತ್ವ ಸೂಚಿಸಿದೆ ಎಂದು

ಕಳೆದ 15 ದಿನಗಳಲ್ಲಿ ಮೂವರು ಬಿಜೆಪಿ ಶಾಸಕರು ಮತ್ತು ಓರ್ವ ನಗರ ಘಟಕದ ಅಧ್ಯಕ್ಷರು ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದ್ದರು.

ಸೂರತ್‌ನ ವರಚ್ಚ ಶಾಸಕ ಕುಮಾರ್‌ ಕಣನಿ ಅವರು ಕಲೆಕ್ಟರ್‌ ಕಚೇರಿಯಲ್ಲಿ ಏಜಂಟ್‌ಗಳು ಜಾತಿ ಪ್ರಮಾಣಪತ್ರ ಪ್ರಕ್ರಿಯೆಗೊಳಿಸಲು ಲಂಚ ಕೇಳುತ್ತಿದ್ದಾರೆಂದು ಆರೋಪಿಸಿದ್ದರೆ, ಸ್ಥಳೀಯ ಸರೋವರವೊಂದನ್ನು ಸುಂದರೀಕರಣಗೊಳಿಸುವ ತಮ್ಮ ಪ್ರಯತ್ನಳನ್ನು ಸರ್ಕಾರಿ ಅಧಿಕಾರಿಗಳು ಅವಗಣಿಸುತ್ತಿದ್ದಾರೆ ಎಂದು ಜನಾಗಢಢ್‌ ಶಾಸಕ ಸಂಜಯ್‌ ಕೊರ್ಡಿಯಾ ದೂರಿದ್ದರು ಹಾಗೂ ಸಿಎಂಗೆ ಪತ್ರ ಬರೆದಿದ್ದರು.

ಮಹುಧಾ ಶಾಸಕ ಸಂಜಯ್‌ ಸಿಂಗ್‌ ಮಹಿದಾ ಅವರು ತಾಲೂಕು ಅಭಿವೃದ್ಧಿ ಅಧಿಕಾರಿ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದ್ದರು ಹಾಗೂ ಅವರು ಪ್ರಾಥಮಿಕ ಶಾಲೆಯೊಂದಕ್ಕೆ ಕಳಪೆ ಗುಣಮಟ್ಟದ ವಾಟರ್‌ ಕೂಲರ್‌ ಮತ್ತು ಇತರ ವಸ್ತುಗಳನ್ನು ಖರೀದಿಸಿದ್ದರು ಎಂದು ಆರೋಪಿಸಿದ್ದರು.

ಭಾವ್ನಗರ್‌ ಜಿಲ್ಲೆಯ ಗರಿಯಧರ್‌ ಪಟ್ಟಣದ ಬಿಜೆಪಿ ಅಧ್ಯಕ್ಷ ತಮ್ಮ ಪತ್ರದಲ್ಲಿ ಸ್ಥಳೀಯಾಡಳಿತ ಅಧಿಕಾರಿಗಳು ಆಪ್‌ ಶಾಸಕನ ಮಾತುಗಳನ್ನು ಮಾತ್ರ ಆಲಿಸುತ್ತಾರೆಂದು ದೂರಿದ್ದರು.

ಈ ಬೆಳವಣಿಗೆಗಳು ರಾಜ್ಯ ಸರ್ಕಾರದ ಆತಂಕಕ್ಕೆ ಕಾರಣವಾಗಿದ್ದು ಯಾವುದೇ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡದಂತೆ ಪಕ್ಷ ಮುಖಂಡರಿಗೆ ಸೂಚಿಸಲಾಗಿದೆ.

ಲೋಕಸಭಾ ಚುನಾವಣೆ ವೇಳೆ ಪಕ್ಷದಲ್ಲಿ ಸಾಕಷ್ಟು ಭಿನ್ನಮತವಿದ್ದುದರಿಂದ ಹಲವು ಬಿಜೆಪಿ ನಾಯಕರು ಕೆಲ ಕ್ಷೇತ್ರಗಳಲ್ಲಿ, ಪ್ರಮುಖವಾಗಿ ಬಾನಸ್ಕಂತ, ವಡೋದರಾ, ಪೋರ್‌ಬಂದರ್‌, ಪಟನ್‌, ಅಮ್ರೇಲಿ, ಆನಂದ್‌ ಮತ್ತು ಸಬರ್‌ಕಂತದಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರೆ ಇನ್ನು ಕೆಲವರು ದೂರವುಳಿದಿದ್ದರು ಎನ್ನಲಾಗಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News