ಪೊಲೀಸ್ ಅಧಿಕಾರಿಗಳು, ಪತ್ರಕರ್ತನಿಂದ ಕಿರುಕುಳ: ರಾಜಸ್ತಾನದ ದಲಿತ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ

Update: 2024-08-24 16:37 GMT

   ಸಾಂದರ್ಭಿಕ ಚಿತ್ರ

ಜೈಪುರ: ರಾಜಸ್ಥಾನದ ಜೈಪುರದ ಬಾನ್‌ಕ್ರೋಟಾ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಹೊರಠಾಣೆಯೊಂದರಲ್ಲಿ ದಲಿತ ಸಮುದಾಯದ ಹೆಡ್‌ಕಾನ್‌ಸ್ಟೇಲ್ ಒಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಡ್‌ಕಾನ್‌ಸ್ಟೇಬಲ್ ಬಾಬು ಲಾಲ್ ಬೈರ್ವಾ ಆತ್ಮಹತ್ಯೆ ಮಾಡಿಕೊಂಡವರು. ತನ್ನ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಪತ್ರಕರ್ತ ಕಾರಣರೆಂದು ಬಾಬುಲಾಲ್ ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿ ಬೈರ್ವಾ ಹಾಗೂ ಇತರ ಕೆಲವು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದರು. ಆವಾಗಿನಿಂದ ಮೇಲಾಧಿಕಾರಿಗಳು ಹಾಗೂ ಓರ್ವ ಪತ್ರಕರ್ತನಿಂದ ತಾನು ಕಿರುಕುಳಕ್ಕೊಳಗಾಗಿರುವುದಾಗಿ ಬೈರ್ವಾ 6 ಪುಟಗಳ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಬೈರ್ವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪುತ್ರ ತನುಜ್ ಬಾಂಕ್ರೋಟ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘‘ಕಳೆದ ಒಂದು ವರ್ಷದಿಂದ ನನ್ನ ತಂದೆಯವರ ಮೇಲೆ ಎಸಿಪಿ ಅನಿಲ್ ಶರ್ಮಾ, ಹೆಚ್ಚುವರಿ ಎಸ್‌ಪಿ ಜಗದೀಶ್ ವ್ಯಾಸ್ , ಸಬ್ ಇನ್ಸ್‌ಪೆಕ್ಟರ್ ಅಶುತೋಷ್ ಸಿಂಗ್‌ ಹಾಗೂ ಪತ್ರಕರ್ತ ಕಮಲ್ ದೇಗಡಾ ಅವರು ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ತಂದೆಯವರು ತೀವ್ರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಬಗ್ಗೆ ಅವರು ನಮ್ಮೊಂದಿಗೆ ಹಾಗೂ ಪರಿಚಯಸ್ಥರೊಂದಿಗೆ ಹೇಳಿಕೊಂಡಿದ್ದರು’’ ಎಂದು ಬೈರ್ವಾ ಅವರ ಪುತ್ರ ತನುಜ್‌ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರನ್ನು ಉದ್ದೇಶಿಸಿ ಬೈರ್ವಾ ಅವರು ಪತ್ರವನ್ನು ಬರೆದಿದ್ದಾರೆ. ಪತ್ರಕರ್ತ ಕಮಲ್ ದೇಗ್ಡಾ , ತನ್ನನ್ನು ಕೆಳಜಾತಿಯವನೆಂದು ನಿಂದಿಸುತ್ತಿದ್ದುದಾಗಿ , ಬೈರ್ವಾ ಅವರು ಪತ್ರದಲ್ಲಿ ಬರೆದಿದ್ದಾರೆ. ನಮಗೆ ನ್ಯಾಯ ಸಿಗಬೇಕಾಗಿದೆ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

40ರ ಹರೆಯದ ಬೈರ್ವಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಾದ ವ್ಯಾಸ್, ಶರ್ಮಾ ಅಶುತೋಷ್ ಸಿಂಗ್ ಹಾಗೂ ಪತ್ರಕರ್ತ ಕಮಲ್ ದೇಗ್ಡಾ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಹಾಗೂ ಎಸ್‌ಸಿ, ಎಸ್‌ಟಿ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ಬೈರ್ವಾ ಅವರ ಸಾವಿಗೆ ಸಂಬಂಧಿಸಿ ಸಿಬಿಐ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶಾಸಕ ಹಾಗೂ ರಾಜಸ್ತಾನ ವಿಧಾನಸಭೆಯ ಪ್ರತಿಪಕ್ಷ ನಾಯಕ ಟಿಕಾರಾಮ್ ಜುಲ್ಲಿ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News