ಫುಟ್ಬಾಲ್ ದಂತಕಥೆ ಪಿ.ಕೆ.ಬ್ಯಾನರ್ಜಿ ನಿವಾಸದಲ್ಲಿ ಮನೆಗೆಲಸದ ವ್ಯಕ್ತಿಯ ಹತ್ಯೆ

PC: x.com/IndiaToday
ಕೊಲ್ಕತ್ತಾ: ನಗರದ ಸಾಲ್ಟ್ಲೇಕ್ ಪ್ರದೇಶದಲ್ಲಿರುವ ಭಾರತದ ಫುಟ್ಬಾಲ್ ತಾರೆ ದಿವಂಗತ ಪಿ.ಕೆ.ಬ್ಯಾನರ್ಜಿಯವರ ನಿವಾಸದಲ್ಲಿ ಹಣ ಕಳ್ಳತನದ ಆರೋಪ ಪ್ರಕರಣ ಮನೆಗೆಲಸದ ವ್ಯಕ್ತಿಯ ಹತ್ಯೆಯಲ್ಲಿ ಅಂತ್ಯವಾಗಿದೆ.
ಈ ಮನೆಯಲ್ಲಿ ಬ್ಯಾನರ್ಜಿಯವರ ಇಬ್ಬರು ಪುತ್ರಿಯರು ಥಾಯ್ಲೆಂಡ್ ನಿಂದ ಆಗಮಿಸಿದ ಬಳಿಕ ವಾಸ್ತವ್ಯ ಇದ್ದರು. ಈ ಪೈಕಿ ಒಬ್ಬರ ಬ್ಯಾಗ್ ನಿಂದ ನಗದು ಕಾಣೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಬಿದಾನ್ ನಗರ ಠಾಣೆಯಲ್ಲಿ ಅವರು ದೂರು ನೀಡಿದ್ದು, ಮನೆಯ ಸಹಾಯಕ ಗೋಪಿನಾಥ್ ಹಾಗೂ ಚಾಲಕ ಬರುಣ್ ಘೋಷ್ ನನ್ನು ವಿಚಾರಣೆಗೆ ಕರೆಸಲಾಗಿತ್ತು.
ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನೂ ಮನೆಗೆ ಕಳುಹಿಸಲಾಗಿದ್ದು, ಶುಕ್ರವಾರ ರಾತ್ರಿ ಅಂದರೆ ಹೋಳಿ ಹಬ್ಬದ ರಾತ್ರಿ ಇಬ್ಬರೂ ಮದ್ಯಪಾನದಲ್ಲಿ ತೊಡಗಿದ್ದರು. ಕಳ್ಳತನಕ್ಕೆ ಸಂಬಂಧಿಸಿದ ಆರೋಪದಲ್ಲಿ ಇಬ್ಬರ ನಡುವೆ ಜಗಳ ಆರಂಭವಾಯಿತು. ಗೋಪಿನಾಥ್ ಮೇಲೆ ಘೋಷ್ ಹಲವು ಬಾರಿ ಇರಿದಿದ್ದು, ಇದು ಗೋಪಿನಾಥ್ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಘೋಷ್ ನನ್ನು ಬಂಧಿಸಲಾಗಿದ್ದು, ಮತ್ತಷ್ಟು ಪುರಾವೆಗಾಗಿ ಪ್ರಯತ್ನ ಮುಂದುವರಿದಿದೆ.
ಪಿ.ಕೆ.ಬ್ಯಾನರ್ಜಿ 1962ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದು, ರಾಷ್ಟ್ರೀಯ ತಂಡದ ಪರವಾಗಿ 65 ಅಂತರರಾಷ್ಟ್ರೀಯ ಗೋಲುಗಳನ್ನು ದಾಖಲಿಸಿದ್ದರು. 1960ರ ರೋಮ್ ಒಲಿಂಪಿಕ್ಸ್ ನಲ್ಲಿ ಭಾರತ ತಂಡದ ನಾಯಕರಾಗಿದ್ದ ಅವರು, ಅಜೇಯ ಫ್ರಾನ್ಸ್ ತಂಡದ ವಿರುದ್ಧ 1-1 ಸಮಬಲ ಸಾಧಿಸಲು ಗೋಲಿನ ಕೊಡುಗೆ ನೀಡಿದ್ದರು.
2004ರಲ್ಲಿ ಫಿಫಾ ಇವರಿಗೆ ಸೆಂಟಿನಲ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ನೀಡಿತ್ತು. 2020ರಲ್ಲಿ ಅವರು ತಮ್ಮ 83ನೇ ವಯಸ್ಸಿನಲ್ಲಿ ಮೃತಪಟ್ಟರು.