ನ್ಯಾಯಾಲಯಗಳಿಗೆ ಸ್ಫೂರ್ತಿಯಾಗಲು ದೇಗುಲಗಳ ಮೇಲಿನ ಧ್ವಜಗಳನ್ನು ಪ್ರಸ್ತಾವಿಸಿದ ಸಿಜೆಐಗೆ ಬುದ್ಧಿಜೀವಿಗಳ ತರಾಟೆ

Update: 2024-01-08 12:38 GMT

CJI D.Y. Chandrachud | thewire.in

ಹೊಸದಿಲ್ಲಿ: ಗುಜರಾತಿನ ರಾಜಕೋಟ್ ಗೆ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರ ಜ.6ರ ಭೇಟಿಯು ಹಲವರ ಹುಬ್ಬುಗಳನ್ನೇರಿಸಿದೆ. ಸಾರ್ವಜನಿಕವಾಗಿ ವರದಿಯಾಗಿದ್ದ ದೇಗುಲ ಭೇಟಿಯ ಬಳಿಕ ಸಿಜೆಐ, ‘ಮುಂಬರುವ ಪೀಳಿಗೆಗಳಿಗಾಗಿ ’ನ್ಯಾಯದ ಧ್ವಜʼವು ಸದಾ ಹಾರುತ್ತಿರಲು ದೇವಸ್ಥಾನಗಳ ಮೇಲೆ ಹಾರುತ್ತಿರುವ,ನಮ್ಮೆಲ್ಲರನ್ನೂ ಒಗ್ಗೂಡಿಸುವ ಧ್ವಜಗಳಿಂದ ಜಿಲ್ಲಾ ನ್ಯಾಯಾಧೀಶರು ಸ್ಫೂರ್ತಿಯನ್ನು ಪಡೆಯಬೇಕು’ ಎಂದು ಹೇಳಿದ್ದಾರೆ.

ತನ್ನ ಎರಡು ದಿನಗಳ ಗುಜರಾತ್ ಪ್ರವಾಸದ ಸಂದರ್ಭದಲ್ಲಿ ತಾನು ಭೇಟಿ ನೀಡಿದ್ದ ದ್ವಾರಕಾ ಮತ್ತು ಸೋಮನಾಥ ಮಂದಿರಗಳ ಮೇಲಿನ ಧ್ವಜಗಳಿಂದ ತಾನು ಸ್ಫೂರ್ತಿಯನ್ನು ಪಡೆದಿದ್ದೇನೆ ಎಂದು ಅವರು ಹೇಳಿದ್ದರು. ಭಾರತೀಯ ಸಂಪ್ರದಾಯದ ಸಾರ್ವತ್ರಿಕತೆಗೆ ಒತ್ತು ನೀಡಿದ್ದ ಅವರು, ʼವಕೀಲರಾಗಿ,ನ್ಯಾಯಾಧೀಶರಾಗಿ ಮತ್ತು ಪ್ರಜೆಗಳಾಗಿ ನಮ್ಮೆಲ್ಲರಿಗೂ ಮಿಗಿಲಾದ ಒಗ್ಗೂಡಿಸುವ ಶಕ್ತಿಯೊಂದಿದೆ. ನಮ್ಮ ಮಾನವೀಯತೆಯು ಈ ಒಗ್ಗೂಡಿಸುವ ಶಕ್ತಿಯಾಗಿದ್ದು ಮಹಾತ್ಮಾ ಗಾಂಧಿಯವರ ಜೀವನ ಮತ್ತು ಆದರ್ಶಗಳಿಂದ ಪ್ರೇರಿತವಾಗಿದೆ ಮತ್ತು ನ್ಯಾಯಾಂಗವು ಎದುರಿಸುತ್ತಿರುವ ಸವಾಲುಗಳನ್ನು ತಿಳಿದುಕೊಳ್ಳಲು ಹಾಗೂ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿವಿಧ ರಾಜ್ಯಗಳಿಗೆ ಭೇಟಿ ನೀಡಲು ಆರಂಭಿಸಿದ್ದೇನೆ ’ ಎಂದೂ ಹೇಳಿದ್ದರು.

ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನ್ಯಾ.ಚಂದ್ರಚೂಡ್, ಸೋಮನಾಥ ದೇಗುಲದಲ್ಲಿಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ತನ್ನ ಗಮನವನ್ನು ಸೆಳೆದಿದೆ ಎಂದರು.ಈ ವ್ಯವಸ್ಥೆಯನ್ನು ಅನುಸರಿಸುವಂತೆ ಗುಜರಾತಿನಲ್ಲಿಯ ನ್ಯಾಯಾಲಯಗಳನ್ನು ಅವರು ಆಗ್ರಹಿಸಿದ್ದರು.

ನ್ಯಾ.ಚಂದ್ರಚೂಡ್ ಅವರ ಹೇಳಿಕೆಗಳನ್ನು ರವಿವಾರ ಅನುಮೋದಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಅವರ ಭಾಷಣವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ‘ನಮ್ಮ ಮುಖ್ಯ ನ್ಯಾಯಾಧೀಶರು ರಾಜಕೋಟ್ ಅನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ ಮತ್ತು ಗುಜರಾತಿಯಲ್ಲಿ ಮಾತನಾಡಲು ಮತ್ತು ಜನರನ್ನು ಸಂಪರ್ಕಿಸುವ ಅವರ ಪ್ರಯತ್ನ ಶ್ಲಾಘನೀಯವಾಗಿದೆ’ ಎಂದು ಹೇಳಿದ್ದಾರೆ.

ಇತಿಹಾಸಕಾರ ಮತ್ತು ಬುದ್ಧಿಜೀವಿ ರಾಮಚಂದ್ರ ಗುಹಾ ಅವರು, ಮೋದಿಯವರ ‘ನ್ಯಾಯ ಭಾರತʼದ ಭಾಷೆ ಮತ್ತು ರೂಪಕಗಳಿಂದ ಸೋಂಕಿಗೊಳಗಾಗಿ ಜಿಲ್ಲಾ ನ್ಯಾಯಾಲಯಗಳ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ದೇಗುಲಗಳ ಧ್ವಜಗಳನ್ನು ಎಳೆದುತಂದಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ. ಮುಖ್ಯ ನ್ಯಾಯಾಧೀಶರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ರೂಢಿಸಮ್ಮತ ಹಿಂದು ಸಂಪ್ರದಾಯದ ಆದರ್ಶಗಳು ಮತ್ತು ನಮ್ಮ ಸಂವಿಧಾನದಡಿಯ ಆದರ್ಶಗಳ ನಡುವೆ ಭಾರೀ ಅಂತರವಿದೆ ಎಂದು ಗುಹಾ ವಾದಿಸಿದರು.

ತನ್ನ ಭಾಷಣದಲ್ಲಿ ರೂಢಿಸಮ್ಮತ ಹಿಂದೂ ಸಂಪ್ರದಾಯದ ಆದರ್ಶಗಳು ಮತ್ತು ಸಂವಿಧಾನದಡಿಯ ಆದರ್ಶಗಳ ನಡುವಿನ ಅಖಂಡತೆಯನ್ನು ನ್ಯಾ. ಚಂದ್ರಚೂಡ್ ಪ್ರತಿಪಾದಿಸಿದ್ದರು.

ಫುಲೆಗಳು, ಗಾಂಧಿ ಮತ್ತು ಅಂಬೇಡ್ಕರ್ ಅವರಂತಹವರು ತಳಮಟ್ಟದಲ್ಲಿ ಜಾತಿ ತಾರತಮ್ಯವನ್ನು ಪ್ರಶ್ನಿಸಿರದಿದ್ದರೆ ಮತ್ತು ಅಂಬೇಡ್ಕರ್ ನಿರ್ದೇಶನದಡಿ ಭಾರತದ ಸಂವಿಧಾನ ಸಭೆಯು ಪ್ರಜಾಸತ್ತಾತ್ಮಕ ಮತ್ತು ಸಮಾನತೆಯ ಸಂವಿಧಾನದ ಪರವಾಗಿ ಮನುಸ್ಮತಿಯನ್ನು ತಿರಸ್ಕರಿಸಿರದಿದ್ದರೆ ಪುರಿ ಮತ್ತು ದ್ವಾರಕಾದಂತಹ ಸ್ಥಳಗಳು ಈಗಲೂ ತಮ್ಮ ಪ್ರಜಾಪ್ರಭುತ್ವ ವಿರೋಧಿ ಮತ್ತು ಸಮಾನತೆ ವಿರೋಧಿ ದೃಷ್ಟಿಕೋನಗಳನ್ನು ಸಂಪೂರ್ಣವಾಗಿ ಹೊಂದಿರುತ್ತಿದ್ದವು. ಆದ್ದರಿಂದ ಮುಖ್ಯ ನ್ಯಾಯಾಧೀಶರು ಹಿಂದು ದೇಗುಲಗಳ ಮೇಲೆ ಸಾಂಪ್ರದಾಯಿಕವಾಗಿ ಹಾರಾಡುತ್ತಿರುವ ಧ್ವಜಗಳು ಮತ್ತು ಆಧುನಿಕ ಪಠ್ಯವಾಗಿರುವ ಸಂವಿಧಾನದ ನಡುವಿನ ಹೊಂದಾಣಿಕೆಯನ್ನು ಪ್ರತಿಪಾದಿಸಿದ್ದು ವಿವಾದಾತ್ಮಕ ಮತ್ತು ದಾರಿ ತಪ್ಪಿಸುವಂಥದ್ದಾಗಿದೆ ಎಂದು ಗುಹಾ ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News