ಮಣಿಪುರ: ಪ್ರತಿಭಟನಾಕಾರರು ,ಭದ್ರತಾ ಪಡೆಗಳ ನಡುವೆ ಘರ್ಷಣೆ, 17 ಮಂದಿಗೆ ಗಾಯ

Update: 2023-08-03 09:26 GMT

ಇಂಫಾಲ: ಬಿಷ್ಣುಪುರ ಜಿಲ್ಲೆಯ ಕಾಂಗ್ವೈ ಹಾಗೂ ಫೌಗಕ್ ಚಾವೊ ಪ್ರದೇಶದಲ್ಲಿ ಗುರುವಾರ ಪ್ರತಿಭಟನಾಕಾರರು ,ಭದ್ರತಾ ಪಡೆಗಳ ನಡುವೆ ಘರ್ಷಣೆ ವೇಳೆ ಸೇನೆ ಹಾಗೂ ಆರ್ ಎಎಫ್ ಸಿಬ್ಬಂದಿ ಅಶ್ರುವಾಯು ಶೆಲ್ ಗಳನ್ನು ಹಾರಿಸಿದ್ದರಿಂದ 17 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಫಾಲ್ ಪೂರ್ವ ಹಾಗೂ ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಈ ಹಿಂದೆ ಘೋಷಿಸಲಾದ ಕರ್ಫ್ಯೂ ಸಡಿಲಿಕೆಗಳನ್ನು ಹಿಂತೆಗೆದುಕೊಂಡಿದ್ದರು, ಇಂಫಾಲ್ ಕಣಿವೆಯಾದ್ಯಂತ ರಾತ್ರಿ ಕರ್ಫ್ಯೂ ವಲ್ಲದೆ ಹಗಲಿನಲ್ಲಿ ನಿರ್ಬಂಧಗಳನ್ನು ವಿಧಿಸಿದರು.

ಘರ್ಷಣೆಗೆ ಮೊದಲು ಗುರುವಾರ ಬೆಳಿಗ್ಗೆ ರಾಜ್ಯದ ಹೈಕೋರ್ಟ್ ಚುರಾಚಂದ್ ಪುರ ಜಿಲ್ಲೆಯ ಉದ್ದೇಶಿತ ಸಮಾಧಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ , ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಕುಕಿ-ಜೋಮಿ ಜನರ ಯೋಜಿತ ಸಾಮೂಹಿಕ ಸಮಾಧಿ ಕಾರ್ಯ ಸ್ಥಗಿತಗೊಂಡಿತು.

ಅಪೆಕ್ಸ್ ಬುಡಕಟ್ಟು ಸಂಸ್ಥೆಯಾದ ಐಟಿಎಲ್ಎಫ್, ಬಿಷ್ಣುಪುರದ ಗಡಿಯಲ್ಲಿರುವ ಚುರಾಚಂದ್ಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ಸ್ಥಳದಲ್ಲಿ 35 ಜನರ ಸಮಾಧಿಯನ್ನು ಮುಂದೂಡುತ್ತಿರುವುದಾಗಿ ಹೇಳಿದೆ.

ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದರಿಂದ ಬಿಷ್ಣುಪುರ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಉದ್ವಿಗ್ನತೆ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News