ಎನ್ಸಿಪಿ ಉಭಯ ಬಣಗಳ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜು

Update: 2023-07-05 02:51 GMT

ಫೋಟೋ: PTI

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣ ಮುಂಬೈನಲ್ಲಿ ಬುಧವಾರ ಬಲಪ್ರದರ್ಶನಕ್ಕೆ ಮುಂದಾಗಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಶರದ್ ಪವಾರ್ ಬಣ ಬೆಳಿಗ್ಗೆ 11 ಗಂಟೆಗೆ ನಾರಿಮನ್ ಪಾಯಿಂಟ್ನ ವೈ.ಬಿ.ಚವ್ಹಾಣ್ ಸೆಂಟರ್ನಲ್ಲಿ ಪಕ್ಷದ ಶಾಸಕರು ಮತ್ತು ಪದಾಧಿಕಾರಿಗಳ ಸಭೆ ಕರೆದಿದ್ದರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಣ ಬಾಂದ್ರಾದ ಮುಂಬೈ ಎಜ್ಯುಕೇಶನ್ ಟ್ರಸ್ಟ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಶಾಸಕರ ಸಭೆ ಕರೆದಿದೆ. ಎನ್ಸಿಪಿ ಸಂಪುಟ ಸದಸ್ಯ ಚಗನ್ ಭುಜಬಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ತಮ್ಮ ಬಣಕ್ಕೆ ಬೆಂಬಲ ಸೂಚಿಸಿ 42 ಮಂದಿ ಶಾಸಕರು ಸಹಿ ಹಾಕಿದ್ದಾರೆ ಎಂದು ಅಜಿತ್ ಬಣದ ಹಿರಿಯ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ.

ಬುಧವಾರ ಮತ್ತೆ ಇಬ್ಬರು ಅಥವಾ ಮೂವರು ಶಾಸಕರು ಅಫಿಡವಿಟ್ಗೆ ಸಹಿ ಮಾಡುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖಂಡರು ಸಂಪರ್ಕಿಸಿದ ಬಹುತೇಕ ಸದಸ್ಯರು ತಾವು ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ ಎಂಧು ಅವರು ವಿವರಿಸಿದ್ದಾರೆ.

ಇನ್ನೊಂದೆಡೆ ಶರದ್ ಪವಾರ್ ಬಣದ ಮುಖ್ಯ ಸಚೇತಕ ಜಿತೇಂದ್ರ ಅವ್ಹಾದ್, ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಎಲ್ಲ 53 ಶಾಸಕರಿಗೆ ವಿಪ್ ನೀಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಶಿಂಧೆ-ಫಡ್ನವೀಸ್ ಸರ್ಕಾರ ಸೇರಿರುವ ಒಂಬತ್ತು ಶಾಸಕರನ್ನು ಹೊರತುಪಡಿಸಿ ಉಳಿದ 44 ಶಾಸಕರಿಗೆ ಸಭೆಯಲ್ಲಿ ಭಾಗವಹಿಸುವಂತೆ ಆದೇಶಿಸಲಾಗಿದೆ ಎಂದು ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News