ಯಾವುದೇ ಮಸೀದಿ, ಕಬರ್ಸ್ತಾನವನ್ನು ಮುಟ್ಟಲ್ಲ: ವಕ್ಫ್ ಮಸೂದೆ ಕುರಿತು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ

ರವಿಶಂಕರ್ ಪ್ರಸಾದ್ (PTI)
ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಹೇಳಿದರು.
ಎನ್ಡಿಟಿವಿಯೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿದ ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಯಾವುದೇ ಮಸೀದಿ, ಪ್ರಾರ್ಥನಾ ಸ್ಥಳ ಅಥವಾ ಕಬರ್ಸ್ತಾನವನ್ನು ಮುಟ್ಟುವುದಿಲ್ಲ. ಸಮಸ್ಯೆಯು ಬಹಳ ಸರಳ ಮತ್ತು ನೇರವಾಗಿದೆ. ವಕ್ಫ್ ಅನ್ನು ರಚಿಸಿದ ʼವಖಿಫ್ʼನ ಉದ್ದೇಶವನ್ನು ವ್ಯವಸ್ಥಾಪಕರಾಗಿರುವ ‘ಮುತ್ತವಲಿ’ ಸರಿಯಾಗಿ ಕಾರ್ಯಗತಗೊಳಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುವುದು ಇದರ ಉದಾತ್ತ ಉದ್ದೇಶವಾಗಿದೆ. ವಕ್ಫ್ ಒಂದು ಧಾರ್ಮಿಕ ಸಂಸ್ಥೆ ಅಲ್ಲ. ಇದು ಕಾನೂನು ಅಥವಾ ಶಾಸನಬದ್ಧ ಸಂಸ್ಥೆಯಾಗಿದೆ. ಮುತ್ತವಲಿ ಕೇವಲ ವ್ಯವಸ್ಥಾಪಕ. ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕುಗಳಿಲ್ಲ. ವಕ್ಫ್ ಮಾಡಿದ ಬಳಿಕ ಆಸ್ತಿಯು ಅಲ್ಲಾಹನಿಗೆ ಸೇರುತ್ತದೆ. ಮಸೂದೆಯು ಮುಸ್ಲಿಂ ಮಹಿಳೆಯರ, ವಿಧವೆಯರು ಮತ್ತು ಸಮುದಾಯದ ಅಂಚಿನಲ್ಲಿರುವವರ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ನನ್ನ ಹುಟ್ಟೂರಾದ ಪಾಟ್ನಾದ ಡಾಕ್ ಬಂಗಲೆ ಸಮೀಪ ವಕ್ಫ್ ಭೂಮಿ ಇದೆ. ಆದರೆ ಅಲ್ಲಿ ಪಂಚತಾರಾ ಹೋಟೆಲ್ಗಳು ಮತ್ತು ಶೋರೂಮ್ಗಳು ತಲೆಯೆತ್ತಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ ಮತ್ತು ಅಲ್ಲಿ ಎಷ್ಟು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದರು.