ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಯಶವಂತ್ ವರ್ಮಾ ಪ್ರಮಾಣ ವಚನ

ನ್ಯಾ. ಯಶವಂತ್ ವರ್ಮಾ | PTI
ಹೊಸದಿಲ್ಲಿ: ಕಳೆದ ತಿಂಗಳು ತಮ್ಮ ನಿವಾಸದಲ್ಲಿ ಅರೆ ಸುಟ್ಟ ನಗದಿನ ಕಂತೆಗಳು ಪತ್ತೆಯಾದ ವಿವಾದವು ಇನ್ನೂ ಹೊಗೆಯಾಡುತ್ತಿರುವಾಗಲೇ ನ್ಯಾ. ಯಶವಂತ್ ವರ್ಮಾ ಶನಿವಾರ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನ್ಯಾ. ಯಶವಂತ್ ವರ್ಮ ಪ್ರಮಾಣ ವಚನ ಸ್ವೀಕರಿಸಿದರೂ, ಸದ್ಯಕ್ಕೆ ಅವರಿಗೆ ಯಾವುದೇ ನ್ಯಾಯಾಂಗ ಕಾರ್ಯಗಳನ್ನು ವಹಿಸಲಾಗುವುದಿಲ್ಲ ಎಂದು ಮೂಲಗಳ ದೃಢಪಡಿಸಿವೆ.
ತಮ್ಮ ನಿವಾಸದಲ್ಲಿ ಪತ್ತೆಯಾಗಿದ್ದ ನಗದಿನ ಕಂತೆಗಳ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು ಆಂತರಿಕ ತನಿಖೆಗೆ ಆದೇಶಿಸಿದ ಬೆನ್ನಿಗೇ, ನ್ಯಾ. ಯಶವಂತ್ ವರ್ಮಾ ಅವರನ್ನು ದಿಲ್ಲಿ ಹೈಕೋರ್ಟ್ ನಿಂದ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಲಾಗಿತ್ತು. ನ್ಯಾ. ಯಶ್ವಂತ್ ವರ್ಮಾರ ನಿವಾಸದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತ ಘಟನೆಯ ಸಂದರ್ಭದಲ್ಲಿ ಪತ್ತೆಯಾಗಿದ್ದ ನೋಟಿನ ಕಂತೆಗಳಿಗೆ ಸಂಬಂಧಿಸಿದಂತೆ ಈ ತನಿಖೆಗೆ ಆದೇಶಿಸಲಾಗಿದೆ.
ಈ ನಡುವೆ, ನ್ಯಾ. ಯಶವಂತ್ ವರ್ಮಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆ ಹಿಡಿಯಬೇಕು ಎಂದು ಬುಧವಾರ ಅಲಹಾಬಾದ್ ನ ಲಕ್ನೊ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ವಕೀಲ ವಿಕಾಶ್ ಚತುರ್ವೇದಿ ಸಲ್ಲಿಸಿದ್ದ ಈ ಅರ್ಜಿಯಲ್ಲಿ ನ್ಯಾ. ಯಶವಂತ್ ವರ್ಮಾ ವಿರುದ್ಧ ಆದೇಶಿಸಲಾಗಿರುವ ತನಿಖೆ ಪೂರ್ಣಗೊಳ್ಳುವವರೆಗೂ, ಅವರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಮಾಣ ವಚನ ಬೋಧಿಸಬಾರದು ಎಂದು ಮನವಿ ಮಾಡಲಾಗಿತ್ತು.
ಈ ವಿವಾದದ ಕುರಿತು ಕಾನೂನು ಸಿಬ್ಬಂದಿ ವರ್ಗದಿಂದಲೂ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದಕ್ಕೂ ಮುನ್ನ, ನ್ಯಾ. ಯಶವಂತ್ ವರ್ಮಾ ರನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸುವ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧಾರವನ್ನು ಖಂಡಿಸಿದ್ದ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್, “ನಾವು ಕಸದ ತೊಟ್ಟಿಗಳಲ್ಲ” ಎಂದು ಬಲವಾಗಿ ಆಕ್ಷೇಪಿಸಿ, ಅಲಹಾಬಾದ್ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿತ್ತು. ನ್ಯಾ. ಯಶವಂತ್ ವರ್ಮಾ ರನ್ನು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಿರುವ ಕುರಿತು ಆ ಪತ್ರದಲ್ಲಿ ಅಸಮಾಧಾನವನ್ನೂ ವ್ಯಕ್ತಪಡಿಸಲಾಗಿತ್ತು.