‘₹’ ಚಿಹ್ನೆಗೆ ತಮಿಳುನಾಡು ಸರಕಾರದ ವಿರೋಧದಿಂದ ಪ್ರತ್ಯೇಕತಾವಾದಿ ಭಾವನೆಗಳಿಗೆ ಕುಮ್ಮಕ್ಕು: ನಿರ್ಮಲಾ ಸೀತಾರಾಮನ್ ಆಕ್ರೋಶ
Photo: PTI
ಹೊಸದಿಲ್ಲಿ: ಅಧಿಕೃತ ‘ ₹’ ಚಿಹ್ನೆಯ ಬದಲಿಗೆ ತಮಿಳುನಾಡಿನ ರೂ. ಅಕ್ಷರವನ್ನು ಬಳಸುವ ತಮಿಳುನಾಡು ಸರಕಾರದ ನಡೆಯು ಅಪಾಯಕಾರಿ ಮನಸ್ಥಿತಿಯ ಸಂಕೇತವಾಗಿದ್ದು, ಭಾರತದ ಏಕತೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಪ್ರಾದೇಶಿಕ ಗೌರವದ ಹೆಸರಿನಲ್ಲಿ ಪ್ರತ್ಯೇಕತಾವಾದಿ ಭಾವನೆಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘‘ ಒಂದು ವೇಳೆ ‘ ₹’ ಚಿಹ್ನೆಯ ಬಗ್ಗೆ ಡಿಎಂಕೆಗೆ ಸಮಸ್ಯೆ ಇದ್ದಲ್ಲಿ, 2010ರಲ್ಲಿ ಈ ಚಿಹ್ನೆಯನ್ನು ಅಧಿಕೃತವಾಗಿ ಅಂಗೀಕರಿಸಿದಾಗ, ಆಗಿನ ಯುಪಿಎ ಸರಕಾರದ ಭಾಗವಾಗಿದ್ದ ಡಿಎಂಕೆ ಯಾಕೆ ಪ್ರತಿಭಟಿಸಲಿಲ್ಲ? ವಿಪರ್ಯಾಸವೆಂದರೆ, ‘ ₹’ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಡಿ. ಉದಯ ಕುಮಾರ್ ಅವರು, ಡಿಎಂಕೆ ಮಾಜಿ ಶಾಸಕ ಎನ್. ಧರ್ಮಲಿಂಗಂ ಅವರ ಪುತ್ರ. ಈಗ ಚಿಹ್ನೆಯನ್ನು ಅಳಿಸುವ ಮೂಲಕ ಡಿಎಂಕೆಯು ರಾಷ್ಟೀಯ ಚಿಹ್ನೆಯನ್ನು ತಿರಸ್ಕರಿಸಿದೆ ಮಾತ್ರವಲ್ಲದೆ ತಮಿಳು ಯುವಕನೊಬ್ಬ ಸೃಜನಶೀಲ ಕೊಡುಗೆಗೆ ಅಗೌರವವನ್ನು ತೋರಿದೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.