ನಿಶ್ಚಿತಾರ್ಥ ರದ್ದಾದ ಹಿನ್ನೆಲೆ; ಯುವತಿಯನ್ನು ಹತ್ಯೆ ಮಾಡಿದ ಯುವಕ

Update: 2023-07-11 03:17 GMT

ಗುರುಗ್ರಾಮ: ನಿಶ್ಚಿತಾರ್ಥ ಮುರಿದು ಬಿದ್ದ ಸಿಟ್ಟಿನಿಂದ ಯುವಕನೊಬ್ಬ ನೆರೆಮನೆಯ ಯುವತಿಯನ್ನು ನಡು ರಸ್ತೆಯಲ್ಲೇ ಇರಿದು ಸಾಯಿಸಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಸೆಕ್ಟರ್ 22 ಗ್ರಾಮದಲ್ಲಿ 19 ವರ್ಷದ ಯುವತಿಗೆ ಹಲವು ಬಾರಿ ಇರಿದಿದ್ದು, ಯುವತಿ ತನ್ನ ತಾಯಿಯ ತೋಳಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.

ರಾಜ್ಕುಮಾರ್ (23) ಎಂಬ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ನಿಶ್ಚಿತಾರ್ಥ ಮುರಿದು ಬಿದ್ದ ಸಿಟ್ಟಿನಿಂದ ಈತ ನೇಹಾ ಎಂಬ ಯುವತಿಯನ್ನು ಚಾಕುವಿನಿಂದ ಪದೇ ಪದೇ ಇರಿಯುತ್ತಿದ್ದಾಗ ಯುವತಿಯ ತಾಯಿ ನೆರವಿಗಾಗಿ ಅಕ್ಕಪಕ್ಕದವರ ಬಳಿ ಯಾಚಿಸಿದ್ದಾರೆ. ಆದರೆ ಘಟನೆಯನ್ನು ಕಿಟಕಿ ಹಾಗೂ ಬಾಲ್ಕನಿಯಿಂದ ನೋಡುತ್ತಿದ್ದ ನೆರೆಯವರು ಮಧ್ಯಪ್ರವೇಶಿಸುವ ಧೈರ್ಯ ತೋರಲಿಲ್ಲ ಎಂದು ಹೇಳಲಾಗಿದೆ.

ರಾಜ್ ಹಾಗೂ ನೇಹಾ ಕುಟುಂಬದವರು ಉತ್ತರ ಪ್ರದೇಶದ ಬದುವಾನ್ ಜಿಲ್ಲೆಯ ಒಂದೇ ಗ್ರಾಮದವರಾಗಿದ್ದು, ಯುವತಿ ಅಕ್ಕಪಕ್ಕದ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು ಎಂದು ಎಸಿಪಿ ವರುಣ್ ದಾಹಿಯಾ ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ರಾಜ್ ಹಾಗೂ ನೇಹಾ ಅವರ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಆದರೆ ರಾಜ್ ನಡತೆಯ ಬಗ್ಗೆ ಕುಟುಂಬದವರಿಗೆ ಸಂದೇಹಗಳಿವೆ ಎಂಬ ಕಾರಣಕ್ಕೆ ಯುವತಿಯ ತಾಯಿ ಈ ನಿಶ್ಚಿತಾರ್ಥ ರದ್ದುಪಡಿಸಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಬೆಳಿಗ್ಗೆ 11.45ರ ಸುಮಾರಿಗೆ ನೇಹಾ ಹಾಗೂ ಆಕೆಯ ತಾಯಿ ಮನೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ರಾಜ್ ಅಲ್ಲಿಗೆ ಆಗಮಿಸಿದ್ದಾನೆ. ಕೆಲ ನಿಮಿಷಗಳ ಕಾಲ ವಾಗ್ವಾದ ನಡೆದಿದೆ. ಆಗ ತನ್ನ ಬ್ಯಾಗ್ನಿಂದ ಚಾಕು ತೆಗೆದ ಯುವಕ ಯುವತಿಯ ಹೊಟ್ಟೆಗೆ ಇರಿದಿದ್ದಾನೆ. ನೇಹಾ ಪ್ರಜ್ಞೆ ತಪ್ಪಿ ಬೀಳುವವರೆಗೂ ಪದೇ ಪದೇ ಚಾಕುವಿನಿಂದ ಇರಿಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News