ಶೌಚಗುಂಡಿ ದುರಂತ | 24 ತಾಸುಗಳಲ್ಲಿ 8 ಮೃತ್ಯು
ಹೊಸದಿಲ್ಲಿ : ಕಳೆದ 24 ತಾಸುಗಳಲ್ಲಿ ಗುಜರಾತ್ ಹಾಗೂ ಬಿಹಾರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.
ಗುಜರಾತ್ನ ಕಛ್ ಚಿಲ್ಲೆಯಲ್ಲಿ ಅಗ್ರೊಟೆಕ್ ಕಂಪೆನಿಯೊಂದರ ಕಟ್ಟಡದ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದರೆ, ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ತಮ್ಮ ಮನೆಯ ಶೌಚಗುಂಡಿಯ ಸ್ವಚ್ಛತೆಯಲ್ಲಿ ತೊಡಗಿದ್ದ ಒಂದೇ ಕುಟುಂಬದ ಮೂವರು, ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.
ಗುಜರಾತ್ನ ಕಛ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ, ಇಮಾಮಿ ಅಗ್ರೊಟೆಕ್ ಕಂಪೆನಿಯ ಶೌಚಗುಂಡಿಯನ್ನು ಸ್ಛಚ್ಛಪಡಿಸಲು ಕಾರ್ಮಿಕನೊಬ್ಬ ಇಳಿದಾಗ, ಆತ ಉಸಿರುಗಟ್ಟಿ ಪ್ರಜ್ಞೆ ತಪ್ಪಿಬಿದ್ದನೆನ್ನಲಾಗಿದೆ. ಆಗ ಆತನ ರಕ್ಷಣೆಗಾಗಿ ಟ್ಯಾಂಕ್ನೊಳಗೆ ಇಳಿದ ಇನ್ನಿಬ್ಬರು ಕಾರ್ಮಿಕರು ಕೂಡಾಬವಳಿ ಬಂದು ಬಿದ್ದುಬಿಟ್ಟರು. ಆಗ ಅವರನ್ನು ಅನುಸರಿಸಿದ ಇನ್ನಿಬ್ಬರು ಕಾರ್ಮಿಕರು ಕೂಡಾ ಕುಸಿದು ಬಿದ್ದರು. ಹೀಗೆ ಎಲ್ಲಾ ಐದು ಮಂದಿ ಕಾರ್ಮಿಕರು ಸಾವನ್ನಪ್ಪಿದರೆಂದು ಬಾಗಮರ್ ತಿಳಿಸಿದರು.
ಇದೊಂದು ಆಕಸ್ಮಿಕ ಸಾವೆಂದು ಪರಿಣಿಸಿ ಕಾಂಡ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ದುರಂತದಲ್ಲಿ ಮೃತಪಟ್ಟವರನ್ನು ಸಿದ್ದಾರ್ಥ ತಿವಾರಿ, ಅಜ್ಮತ್ ಖಾನ್, ಅಶೀಷ್ ಗುಪ್ತಾ ಹಾಗೂ ಸಂಜಯ್ ಠಾಕೂರ್ ಎಂಜು ಗುರುತಿಸಲಾಗಿದೆ.
ದುರಂತ ಸಂಭವಿಸಿದ ಇಮಾಮಿ ಅಗ್ರೋಟೆಕ್ ಕಂಪೆನಿಯು ಖಾದ್ಯತೈಲ ಹಾಗೂ ಜೈವಿಕ ಡೀಸೆಲ್ ಅನ್ನು ಉತ್ಪಾದಿಸುತ್ತದೆ.