ಜನರ ಗುಂಪಿನ ಮೇಲೆ ಪೋಲೀಸ್‌ ಲಾಠಿಯಿಂದ ಹಲ್ಲೆ ನಡೆಸಿದ ಶಿವಸೇನೆ ಶಾಸಕ; ವಿಡಿಯೊ ವೈರಲ್

Update: 2024-03-02 08:37 GMT
Screengrab: X/@ss_suryawanshi

ಮುಂಬೈ: ನಾನು ಹುಲಿಯೊಂದನ್ನು ಗುಂಡಿಕ್ಕಿ ಕೊಂದಿದ್ದೆ ಎಂದು ಹೇಳಿಕೊಂಡು ವಿವಾದಕ್ಕೆ ಕಾರಣವಾಗಿದ್ದ ಬುಲ್ಧಾನಾ ಕ್ಷೇತ್ರದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದು, ಜನರ ಗುಂಪೊಂದರ ಮೇಲೆ ಪೊಲೀಸರ ಲಾಠಿಯಿಂದ ಅವರು ಹಲ್ಲೆ ನಡೆಸುತ್ತಿರುವ ವಿಡಿಯೊ ಶುಕ್ರವಾರ ವೈರಲ್ ಆಗಿದೆ.

ಉತ್ಸವವೊಂದರಲ್ಲಿ ಗಾಯಕ್ವಾಡ್ ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಆ ವಿಡಿಯೊದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿ ನಾನೇ ಆಗಿದ್ದು, ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳ ಮೇಲೆ  ಹಲ್ಲೆ ನಡೆಸುವ ಅನಿವಾರ್ಯತೆ ನನಗೆ ಎದುರಾಯಿತು ಎಂದು ಗಾಯಕ್ವಾಡ್ ತಪ್ಪೊಪ್ಪಿಕೊಂಡಿದ್ದಾರೆ.

“ಈ ಘಟನೆ ಶಿವ ಜಯಂತಿಯಂದು ನಡೆದದ್ದು. ಮದ್ಯಪಾನ ಮಾಡಿದ್ದ ಹಾಗೂ ಗಾಂಜಾ ಸೇವಿಸಿದ್ದ ಇಬ್ಬರು ವ್ಯಕ್ತಿಗಳು ಮಹಿಳೆಯೊಬ್ಬರ ಮೇಲೆ ರೇಜರ್ ನಿಂದ ಹಲ್ಲೆ ನಡೆಸಲು ಯತ್ನಿಸುತ್ತಿದ್ದ ಸಂದರ್ಭ ಮಧ್ಯಪ್ರವೇಶಿಸಿದ ನಾನು ಅವರು ಹಾಗೆ ಮಾಡದಂತೆ ತಡೆಯಲು ಅವರ ಮೇಲೆ ಹಲ್ಲೆ ನಡೆಸಬೇಕಾಯಿತು” ಎಂದು ಗಾಯಕ್ವಾಡ್ ಸ್ಪಷ್ಟನೆ ನೀಡಿದ್ದಾರೆ.

ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಪದೇ ಪದೇ ವಿವಾದಗಳಿಗೆ ಸಿಲುಕುತ್ತಿದ್ದು, ಇತ್ತೀಚೆಗೆ, ಬೇಟೆಯಾಡಿದ ಹುಲಿಯ ಉಗುರನ್ನು ತಮ್ಮ ಕುತ್ತಿಗೆಯ ಸುತ್ತ ಹಾಕಿಕೊಂಡು, ನಾನು 1987ರಲ್ಲಿ ಹುಲಿಯೊಂದನ್ನು ಬೇಟೆಯಾಡಿದ್ದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಇದರ ಬೆನ್ನಿಗೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶನಿವಾರ ಗಾಯಕ್ವಾಡ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಹುಲಿಯ ಅವಶೇಷಗಳನ್ನು ವಶಪಡಿಸಿಕೊಂಡಿದ್ದರು ಹಾಗೂ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News