2019ರ ಚುನಾವಣೆಗಳಲ್ಲಿ ಬಿಜೆಪಿ ‘ಕೈವಾಡ’ ಕುರಿತು ಅಶೋಕ ವಿವಿ ಪ್ರೊಫೆಸರ್ ಪ್ರಬಂಧ ನಿಜಕ್ಕೂ ಏನನ್ನು ಹೇಳಿದೆ?

Update: 2023-08-03 16:58 GMT

ಹೊಸದಿಲ್ಲಿ: ಅಶೋಕ ವಿವಿಯಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರೊಫೆಸರ್ ಆಗಿರುವ ಸವ್ಯಸಾಚಿ ದಾಸ್ ಅವರ ಸಂಶೋಧನಾ ಪ್ರಬಂಧವೊಂದು ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಪ್ರಬಂಧವು 2019ರ ಲೋಕಸಭಾ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳಲ್ಲಿಯ ಫಲಿತಾಂಶಗಳಲ್ಲಿ ಆಡಳಿತಾರೂಢ ಬಿಜೆಪಿಯ ಸಂಭಾವ್ಯ ಕೈವಾಡವನ್ನು ಬೆಟ್ಟು ಮಾಡಿದೆ. ನಿಕಟ ಸ್ಪರ್ಧೆಯೇರ್ಪಟ್ಟಿದ್ದ ಕೆಲವು ಕ್ಷೇತ್ರಗಳಲ್ಲಿ ‘ಅಸಮಾನ’ ಮತಗಳಿಕೆಯೊಂದಿಗೆ ಬಿಜೆಪಿ ಗೆಲುವಿಗೆ ಈ ತಿರುಚುವಿಕೆ ಕಾರಣವಾಗಿತ್ತು ಎಂದು ಪ್ರಬಂಧವು ಹೇಳಿದೆ.

‘ಡೆಮಾಕ್ರಟಿಕ್ ಬ್ಯಾಕ್‌ಸ್ಲೈಡಿಂಗ್ ಇನ್ ದಿ ವರ್ಲ್ಡ್ಸ್ ಲಾರ್ಜೆಸ್ಟ್ ಡೆಮಾಕ್ರಸಿ’ ಶೀರ್ಷಿಕೆಯ ಪ್ರಬಂಧವನ್ನು ಪ್ರಕಟಿಸಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಪರ ಹ್ಯಾಂಡಲ್‌ಗಳು ದಾಸ್ ವಿರುದ್ಧ ದಾಳಿಯನ್ನು ನಡೆಸಿವೆ. ಅನಿರೀಕ್ಷಿತ ನಡೆಯೊಂದರಲ್ಲಿ ವಿವಿಯು ಸಂಶೋಧನಾ ಪ್ರಬಂಧದಿಂದ ಅಂತರವನ್ನು ಕಾಯ್ದುಕೊಂಡಿದೆ. ಅಧ್ಯಾಪಕರು,ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ನಡೆಸುವ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಅಥವಾ ಸಾರ್ವಜನಿಕ ಚಟುವಟಿಕೆಗಳು ವಿವಿಯ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅಶೋಕ ವಿವಿಯು ಆ,1ರಂದು ಟ್ವೀಟಿಸಿದೆ. ಪ್ರಬಂಧದ ವಿದ್ವತ್ಪೂರ್ಣ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸಿರುವ ಅದು,ಸದ್ರಿ ಪ್ರಬಂಧವು ಇನ್ನೂ ವಿಮರ್ಶಾತ್ಮಕ ಪುನರ್ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಮತ್ತು ಯಾವುದೇ ಶೈಕ್ಷಣಿಕ ಜರ್ನಲ್‌ನಲ್ಲಿ ಪ್ರಕಟಗೊಂಡಿಲ್ಲ ಎಂದು ಹೇಳಿದೆ.

ತನ್ನ ಅಧ್ಯಾಪಕರನ್ನು ನಡುನೀರಿನಲ್ಲಿ ಕೈಬಿಟ್ಟಿರುವುದಕ್ಕೆ ವಿವಿಯನ್ನು ಕಟುವಾಗಿ ಟೀಕಿಸಿರುವ ಭಾರತದ ಮತ್ತು ವಿದೇಶಗಳ ವಿದ್ವಾಂಸರು,ವಿವಾದಾತ್ಮಕ ಆದರೆ ದಿಟ್ಟ ಅಭಿಪ್ರಾಯಗಳಿಗಾಗಿ ದಾಸ್ ಅವರನ್ನು ಪ್ರಶಂಸಿಸಿದ್ದಾರೆ.

2019ರ ಚುನಾವಣೆಗಳಲ್ಲಿ ಬಿಜೆಪಿಯು 9ರಿಂದ 18ರಷ್ಟು ‘ಹೆಚ್ಚುವರಿ ’ಸ್ಥಾನಗಳನ್ನು ಗೆದ್ದಿದೆ ಮತ್ತು ಈ ಪೈಕಿ 11 ಸ್ಥಾನಗಳಲ್ಲಿ ಅದರ ಗೆಲುವಿನ ಅಂತರ ಶೇ.5ಕ್ಕೂ ಕಡಿಮೆಯಿದೆ ಎನ್ನುವುದನ್ನು 50 ಪುಟಗಳ ಸಂಶೋಧನಾ ಪ್ರಬಂಧವು ಕಂಡುಕೊಂಡಿದೆ.

ಈ ಸಂಖ್ಯೆಯು ಬಿಜೆಪಿಗೆ ತನ್ನ ಸ್ವಂತ ಬಲದಲ್ಲಿ ಸರಕಾರ ರಚಿಸಲು ಅಗತ್ಯವಾಗಿದ್ದ 272ಕ್ಕಿಂತ ತುಂಬ ಕಡಿಮೆಯಿದ್ದರೂ ಡೇಟಾ ವಿಶ್ಲೇಷಣೆಯ ಮೂಲಕ ದಾಸ್ ಅವರು,ಒಂದೇ ಒಂದು ಕ್ಷೇತ್ರದಲ್ಲಿಯೂ ಚುನಾವಣಾ ವಂಚನೆಯು ಅಧಿಕಾರದಲ್ಲಿರುವ ಪಕ್ಷಗಳಿಂದ ಇಂತಹ ಫಲಿತಾಂಶ ತಿರುಚುವಿಕೆಗಳು ಸಾಧ್ಯ ಎನ್ನುವುದನ್ನು ಸೂಚಿಸುತ್ತದೆ ಎಂಬ ಆತಂಕಕಾರಿ ನಿರ್ಧಾರಕ್ಕೆ ಬಂದಿದ್ದಾರೆ. ಇದು ಭಾರತದಲ್ಲಿ ಚುನಾವಣಾ ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ವ್ಯಾಪಕ ಪ್ರಶ್ನೆಗಳನ್ನೆತ್ತಿದೆ.

2014 ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ 2019ರ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರೀ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೇರಿದ್ದಾರೆ. ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ 303 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.

ಪ್ರತಿಪಕ್ಷಗಳು ಇತ್ತೀಚಿನ ಹಲವಾರು ಚುನಾವಣೆಗಳಲ್ಲಿ ಬಿಜೆಪಿಯ ವಿರುದ್ಧ ಅಕ್ರಮಗಳು ಮತ್ತು ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆ ಆರೋಪಗಳನ್ನು ಮಾಡಿವೆ.

ಕುತೂಹಲಕಾರಿಯಾಗಿ ದಾಸ್ ತನ್ನ ಪ್ರಬಂಧದಲ್ಲಿ ಇವಿಎಮ್‌ಗಳ ತಿರುಚುವಿಕೆ ಸಾಧ್ಯತೆಯನ್ನು ಪರಿಗಣಿಸಿಲ್ಲ. ಅವು ಉತ್ತಮ ತಂತ್ರಜ್ಞಾನವನ್ನು ಹೊಂದಿವೆ ಮತ್ತು ಅವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಸ್ತಕ್ಷೇಪ ನಡೆಸುವುದು ತುಂಬ ಕಷ್ಟ ಎಂದು ಹೇಳಿದ್ದಾರೆ. ಚುನಾವಣಾ ಹಸ್ತಕ್ಷೇಪವು ಸ್ಥಳೀಯ ಮತಗಟ್ಟೆ ಮಟ್ಟದಲ್ಲಿ ನಡೆಯುತ್ತದೆ ಮತ್ತು ಭಾರತೀಯ ಚುನಾವಣಾ ಆಯೋಗವು ಡೇಟಾ ಪೋಸ್ಟ್ ಬಳಿಕ ನೇರವಾಗಿ ಹಸ್ತಕ್ಷೇಪ ನಡೆಸುವ ಸಾಧ್ಯತೆಯಿಲ್ಲ ಎಂದು ಅವರು ವಾದಿಸಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಗಳು ಚುನಾವಣಾ ದತ್ತಾಂಶಗಳಲ್ಲಿ ಗಮನಾರ್ಹ ಅವ್ಯಹಾರಗಳನ್ನು ತೋರಿಸಿದೆ ಎಂದು ದಾಸ್ ಅವರ ಪ್ರಬಂಧವು ಪ್ರತಿಪಾದಿಸಿದೆ.

ನಿಕಟ ಸ್ಪರ್ಧೆಯಿದ್ದ ಕ್ಷೇತ್ರಗಳಲ್ಲಿ ಅಲ್ಪ ಅಂತರದೊಂದಿಗೆ ಬಿಜೆಪಿ ಗೆಲುವನ್ನು ಸಾಧಿಸಿದ ಪ್ರಕರಣಗಳು ಚುನಾವಣೆ ಸಂದರ್ಭದಲ್ಲಿ ಪಕ್ಷವು ಆಡಳಿತದಲ್ಲಿದ್ದ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬಂದಿವೆ ಎಂದೂ ಪ್ರಬಂಧವು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News