ಹೊಸದಿಲ್ಲಿ: ಬಾಲಕನನ್ನು ವಿನಾಕಾರಣ ಥಳಿಸಿ ಗಾಯಗೊಳಿಸಿದ ಕುಡುಕರ ಗುಂಪು
ಹೊಸದಿಲ್ಲಿ, ಮೇ 27: ದಕ್ಷಿಣ ದಿಲ್ಲಿಯ ಇಂದ್ರಪ್ರಸ್ಥ ಪ್ರದೇಶದಲ್ಲಿ ಪಾನಮತ್ತ ದುಷ್ಕರ್ಮಿಗಳ ಗುಂಪೊಂದು 16 ವರ್ಷದ ಬಾಲಕನೊಬ್ಬನನ್ನು ವಿನಾ ಕಾರಣ ಮದ್ಯ ಬಾಟಲಿಯಿಂದ ಚೆನ್ನಾಗಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.
ಬಾಲಕನ ಮೇಲೆ ನಡೆಸಿದ ಹಲ್ಲೆಯ ದೃಶ್ಯವನ್ನು ಸೆರೆ ಹಿಡಿದಿದ್ದ ದುಷ್ಕರ್ಮಿಗಳು ಅದನ್ನು ಮೊಬೈಲ್ನಲ್ಲಿ ಹರಿಯಬಿಟ್ಟಿದ್ದರು.
ಪೊಲೀಸರು ಮೊಬೈಲ್ ವೀಡಿಯೋ ಮೂಲಕ ಒಂದೇ ಕಾಲನಿಯಲ್ಲಿ ವಾಸವಿರುವ ಆರು ಮಂದಿ ದುಷ್ಕರ್ಮಿಗಳನ್ನು ಪತ್ತೆ ಹಂಚಿ ಬಂಧಿಸಿದ್ದಾರೆ. ಬಾಲಕನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಥಳಿಸಿದ್ದಾಗಿ ಆರು ಜನರ ಗುಂಪು ತಪ್ಪೊಪ್ಪಿಕೊಂಡಿದೆ. ಬಾಲಕನ ವೈದ್ಯಕೀಯ ವರದಿ ಹಾಗೂ ಕಾನೂನು ಕೌನ್ಸ್ಸಲಿಂಗ್ನಲ್ಲಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೆ ತುತ್ತಾಗಿದ್ದ ಬಾಲಕ ಜೀವಭಯದಿಂದ ಕೆಲವು ಸಮಯ ಮನೆಗೆ ವಾಪಸಾಗಿರಲಿಲ್ಲ ಎಂದು ಬಾಲಕನ ಕುಟುಂಬಸ್ಥರು ಹೇಳಿದ್ದಾರೆ.
ದುಷ್ಕರ್ಮಿಗಳು ನನ್ನನ್ನು ಹಿಡಿದು, ಹೊಡೆಯ ತೊಡಗಿದರು. ಕಳ್ಳನೆಂದು ನನ್ನ ಮೇಲೆ ಆರೋಪ ಮಾಡಿದರು. ಒಂದು ಕೊಠಡಿಯೊಳಗೆ ಕೂಡಿ ಹಾಕಿ ಎಲ್ಲಿದ್ದೇನೆಂದು ತಂದೆ-ತಾಯಿಗೆ ತಿಳಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ಘಟನೆಯ ಬಗ್ಗೆ ಬಾಲಕ ಸುದ್ದಿಗಾರರಿಗೆ ತಿಳಿಸಿದ್ದಾನೆ.