ಎದೆಯ ಬೆಸೆಯುವ ಸೇತುವೆ ಕುಸಿಯದಿರಲಿ

Update: 2022-11-02 04:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಗುಜರಾತ್ ಹತ್ತು ಹಲವು ದುರಂತಗಳಿಗೆ ಎದೆಗೊಟ್ಟು ನಿಂತಿರುವ ರಾಜ್ಯ. ಗುಜರಾತ್ ಎಂದಾಗ ನೆನಪಾಗುವುದು ಭೂಕಂಪ. 2001ರಲ್ಲಿ ನಡೆದ ಭೂಕಂಪಕ್ಕೆ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಲಕ್ಷಾಂತರ ಜನರು ನಿರ್ವಸಿತರಾದರು. ಭೂಕಂಪ, ಸುಂಟರಗಾಳಿಯಂತಹ ಪ್ರಕೃತಿ ವಿಕೋಪಗಳು ಗುಜರಾತ್‌ನ್ನು ಹಲವು ಬಾರಿ ಜರ್ಜರಿತಗೊಳಿಸಿದೆ. ಹಾಗೆಯೇ ಮನುಷ್ಯ ನಿರ್ಮಿತ ದುರಂತಕ್ಕಾಗಿಯೂ ಗುಜರಾತ್ ಕುಖ್ಯಾತವಾಗಿದೆ. 2002ರಲ್ಲಿ ಸಂಭವಿಸಿದ ಗುಜರಾತ್ ಹತ್ಯಾಕಾಂಡ ಪ್ರಕೃತಿ ವಿಕೋಪದಿಂದ ಸಂಭವಿಸಿರುವುದಲ್ಲ. ಮನುಷ್ಯ ವಿಕೋಪದಿಂದ ಸಂಭವಿಸಿರುವುದು. 2,000ಕ್ಕೂ ಅಧಿಕ ಅಮಾಯಕರು ಈ ಕೋಮುಗಲಭೆಯಲ್ಲಿ ಭೀಕರವಾಗಿ ಕೊಲ್ಲಲ್ಪಟ್ಟರು. ಗರ್ಭಿಣಿಯರನ್ನೂ ಬಿಡದೆ ಅತ್ಯಾಚಾರಗೈದು, ಭೀಕರವಾಗಿ ಸಾಯಿಸಲಾಯಿತು. ಬಹುಶಃ ಈ ಭೀಕರ ಹತ್ಯೆಗಳಿಗೆ ಹೋಲಿಸಿದರೆ, ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ ಏನೇನೂ ಅಲ್ಲ. ಗುಜರಾತ್ ಭೂಕಂಪದಲ್ಲಿ ಬೃಹತ್ ಕಟ್ಟಡಗಳು ಕುಸಿದರೆ, ಈ ಕೋಮುಗಲಭೆಯಲ್ಲಿ ಮನುಷ್ಯನ ಘನತೆಯೇ ಕುಸಿದು ಬಿತ್ತು. ಭೂಕಂಪದಿಂದ ಗುಜರಾತ್ ಮೇಲೆದ್ದು ನಿಂತಿದೆಯಾದರೂ, ಆ ಬೃಹತ್ ಹತ್ಯಾಕಾಂಡದ ಕಳಂಕದಿಂದ ಇನ್ನೂ ಮೇಲೆದ್ದು ನಿಲ್ಲಲು ಗುಜರಾತ್‌ಗೆ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ, ಈ ಕಳಂಕವೇ ಗುಜರಾತ್‌ನ ಹಲವು ಪ್ರಮುಖ ನಾಯಕರ ಆಭರಣಗಳಾಗಿವೆ. ಈ ಕಳಂಕದ ಮೂಲಕವೇ ಹಲವರು ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಗಳಿಸಿಕೊಂಡರು. ಇಂತಹ ಗುಜರಾತ್, ಇದೀಗ ತೂಗು ಸೇತುವೆಯೊಂದು ಕುಸಿದು ನೂರಾರು ಜನರ ಸಾವು ನೋವುಗಳಿಗಾಗಿ ಸುದ್ದಿಯಲ್ಲಿದೆ.

ಗುಜರಾತ್‌ನ ಮೊರ್ಬಿಯಲ್ಲಿರುವ ಮಚ್ಚು ನದಿಯ ಶತಮಾನದಷ್ಟು ಹಳೆಯ ತೂಗು ಸೇತುವೆ ಕುಸಿದು ಸುಮಾರು 500 ಮಂದಿ ನೀರು ಪಾಲಾಗಿದ್ದಾರೆ. 150ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿವೆ. ‘ಇದೊಂದು ಅವಘಡ’ ಎಂದು ಬಿಂಬಿಸುವ ಪ್ರಯತ್ನವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಆದರೆ, ಇದು ಅಪಘಾತವಲ್ಲ, ಅಪರಾಧವೆನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಬಿಡುತ್ತದೆ. ಈ ತೂಗು ಸೇತುವೆ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿತ್ತು. ತೀರಾ ಹಳೆಯ ಸೇತುವೆ ಆಗಿರುವುದರಿಂದ ಇದರ ದುರಸ್ತಿ ಕಾಮಗಾರಿ ನಡೆದು ಐದು ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ತೆರವು ಮಾಡಿಕೊಡಲಾಗಿತ್ತು. ಈ ತೆರವು, ಆತುರಾತುರವಾಗಿ ನಡೆದಿದೆ ಎನ್ನುವುದು ಇದೀಗ ಬೆಳಕಿಗೆ ಬರುತ್ತಿದೆ. ತೂಗು ಸೇತುವೆಯನ್ನು ನವೀಕರಣಗೊಳಿಸಿದ ಬಳಿಕ, ಯಾವುದೇ ಕಾರ್ಯಕ್ಷಮತೆ ಪ್ರಮಾಣ ಪತ್ರ ಇಲ್ಲದೆ ಅ. 26ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎನ್ನುವುದನ್ನು ಮೊರ್ಬಿಯ ನಗರಸಭೆ ಮುಖ್ಯಸ್ಥ ಹೇಳಿಕೆ ನೀಡಿದ್ದಾರೆ. ಈ ಸೇತುವೆಯನ್ನು ಮೊದಲು ಮೊರ್ಬಿ ನಗರಸಭೆಯೇ ನಿರ್ವಹಿಸುತ್ತಿತ್ತು. ಆದರೆ, ಕಳೆದ ಮಾರ್ಚ್‌ನಲ್ಲಿ ಇದರ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ 15 ವರ್ಷಗಳಿಗೆ ಗುತ್ತಿಗೆಗೆ ನೀಡಲಾಗಿತ್ತು. ನವೀಕರಣದ ಬಳಿಕ ಸಂಸ್ಥೆ, ಏಕಾಏಕಿ ಪ್ರವಾಸಿಗರಿಗೆ ಮುಕ್ತಗೊಳಿಸಿತ್ತು.

ನವೀಕರಣಗೊಂಡ ಸೇತುವೆಯಲ್ಲಿ ಪ್ರವಾಸಿಗರಿಗೆ ಹಂತಹಂತವಾಗಿ ಮುಕ್ತಗೊಳಿಸುವುದು ಸಂಸ್ಥೆಯ ಹೊಣೆಗಾರಿಕೆಯಾಗಿತ್ತು. ಪುರಾತನ ತೂಗು ಸೇತುವೆ ಆಗಿರುವುದರಿಂದ, ಧಾರಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಅತ್ಯಗತ್ಯವಾಗಿತ್ತು. ಸುಮಾರು 500 ಜನರು ಆ ಸೇತುವೆಯ ಮೇಲಿದ್ದರು ಎನ್ನುವುದೇ ಸಂಸ್ಥೆಯ ಬೇಜವಾಬ್ದಾರಿಯನ್ನು ಹೇಳುತ್ತದೆ. ಮನುಷ್ಯ ತನ್ನ ದುರಾಸೆಗಾಗಿ ಆಹ್ವಾನಿಸಿಕೊಂಡ ದುರಂತ ಇದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಗುಜರಾತ್‌ನ್ನು ಅಭಿವೃದ್ಧಿಗೆ ಮಾದರಿಯಾಗಿಸಲು ಆತುರದ ಕೆಲವು ಪ್ರಯತ್ನಗಳು ನಡೆಯುತ್ತಿವೆ. ಬೃಹತ್ ಯೋಜನೆಗಳನ್ನು ಆತುರಾತುರವಾಗಿ ಗುಜರಾತ್‌ಗೆ ಸ್ಥಳಾಂತರಿಸಲಾಗುತ್ತಿದೆ. ಜನಸಾಮಾನ್ಯರ ಬದುಕಿನ ಕುರಿತಂತೆ ಈ ಅಭಿವೃದ್ಧಿಗಳಿಗೆ ಯಾವ ಕಾಳಜಿಯೂ ಇಲ್ಲ ಎನ್ನುವುದು ಹಲವು ಯೋಜನೆಗಳಿಂದ ಬಹಿರಂಗವಾಗಿವೆ. ಈ ಅಭಿವೃದ್ಧಿಗೆ ಯಾವ ದೂರದೃಷ್ಟಿಯೂ ಇಲ್ಲ. ಸಾವಿರಾರು ಜನರ ಭೂಮಿಯನ್ನು ಕಿತ್ತುಕೊಂಡು 3,000 ಕೋಟಿ ರೂಪಾಯಿ ವೆಚ್ಚದಲ್ಲಿ ಪಟೇಲ್ ಪ್ರತಿಮೆಯನ್ನು ನಿರ್ಮಾಣ ಮಾಡಿದ ಬಳಿಕವೂ ದೇಶವು ಬಡತನದ ಕಾರಣಕ್ಕಾಗಿ ವಿಶ್ವಮಟ್ಟದಲ್ಲಿ ಸುದ್ದಿ ಮಾಡಿತು.

ವಿಶ್ವ ಆರ್ಥಿಕ ಬಿಕ್ಕಟ್ಟಿನಲ್ಲಿ ನರಳುತ್ತಿರುವಾಗ ಭಾರತ ಶಿವಾಜಿ ಪಾರ್ಕ್, ರಾಮಮಂದಿರ, ಪ್ರತಿಮೆಗಳು, ಬುಲೆಟ್ ಟ್ರೈನ್ ಎಂದು ಬಡಬಡಿಸುತ್ತಿದೆ. ಈ ಆತುರದ ಯೋಜನೆಗಳೆಲ್ಲವೂ ಅಂತಿಮವಾಗಿ ಬೃಹತ್ ಆರ್ಥಿಕ ಅವಘಡವೊಂದನ್ನು ಸೃಷ್ಟಿಸಲಿದೆ. ಭವಿಷ್ಯದ ಭಾರೀ ಅವಘಡವೊಂದರ ಸೂಚನೆಯನ್ನು ನಾವು ಗುಜರಾತ್‌ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆಯ ದುರಂತದಲ್ಲಿ ಕಾಣಬಹುದಾಗಿದೆ. ಆತುರದ ನಿರ್ಧಾರಗಳು, ಭ್ರಷ್ಟ ವ್ಯವಸ್ಥೆ, ಅಧಿಕಾರಿಗಳ ಬೇಜವಾಬ್ದಾರಿ, ಮನುಷ್ಯನ ದುರಾಸೆ ಒಟ್ಟು ಸೇರಿ, ತೂಗು ಸೇತುವೆಯ ದುರಂತಕ್ಕೆ ಕಾರಣವಾಗಿವೆ. ಯಾವದೋ ಒಂದು ಸಂಸ್ಥೆಯನ್ನಷ್ಟೇ ಹೊಣೆ ಮಾಡಿ ಕೈತೊಳೆದುಕೊಳ್ಳುವಷ್ಟು ಪ್ರಕರಣ ಸರಳವಾಗಿಲ್ಲ. ಸಂಬಂಧ ಪಟ್ಟವರಿಗೆ ಜನಸಾಮಾನ್ಯರ ಬದುಕಿನ ಮೇಲೆ ಎಳ್ಳಷ್ಟು ಕಾಳಜಿಯಿದ್ದರೂ, ಇಂತಹದೊಂದು ದುರಂತ ಸಂಭವಿಸುತ್ತಿರಲಿಲ್ಲ.

ದುರಂತದ ಬಗ್ಗೆ ಪ್ರಧಾನಿ ಮೋದಿಯವರು ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಯಾವಾಗ ಪ್ರಧಾನಿ ಮೋದಿಯವರು ಮೃತರನ್ನು ನೋಡಲು ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ಪ್ರಕಟವಾಯಿತೋ, ದುರಂತವನ್ನು ಮರೆತು ಜನಪ್ರತಿನಿಧಿಗಳು ಆಸ್ಪತ್ರೆಗೆ ಸುಣ್ಣಬಣ್ಣ ಬಳಿಯಲು ಮುಂದಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಮೋದಿಯವರು ಆಗಮಿಸುತ್ತಿದ್ದಾರೆ ಎಂದು ಇಡೀ ಆಸ್ಪತ್ರೆಯನ್ನು ಆತುರಾತುರವಾಗಿ ಪುನರ್‌ನವೀಕರಣಗೊಳಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಮೆಚ್ಚಿಸುವುದು ಹೊರತು ಪಡಿಸಿ, ಈ ನವೀಕರಣದ ಹಿಂದೆ ಯಾವ ರೀತಿಯ ಜನಪರ ಕಾಳಜಿಯಿಲ್ಲ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ದುರಂತದಿಂದ ಸಂತ್ರಸ್ತರಾದವರ ಬಗ್ಗೆ ಕಾಳಜಿ ವಹಿಸಬೇಕಾಗಿದ್ದ ಆಸ್ಪತ್ರೆ, ಪ್ರಧಾನಿ ಮೋದಿಯವರಿಗಾಗಿ ಗೋಡೆಗಳಿಗೆ ಸುಣ್ಣಬಣ್ಣ ಬಳಿಯಲು ಮುಂದಾಗಿರುವುದೇ ಈ ಅಧಿಕಾರಿಗಳು, ಜನಪ್ರತಿನಿಧಿಗಳ ಸಂವೇದನಾ ಹೀನ ಮನಸ್ಸನ್ನು ಎತ್ತಿ ತೋರಿಸುತ್ತದೆ. ಇಂತಹ ಅಧಿಕಾರಿಗಳು, ಜನಪ್ರತಿನಿಧಿಗಳು ಇರುವವರೆಗೆ ಸೇತುವೆಗಳು ಮುರಿಯುತ್ತಲೇ ಇರುತ್ತವೆ.

ಅಭಿವೃದ್ಧಿಯ ಭರಾಟೆಯಲ್ಲಿ ಮನಸ್ಸುಗಳನ್ನು ಬೆಸೆಯಬೇಕಾಗಿದ್ದ ಸೇತುವೆಗಳು ಕೂಡ ಒಂದೊಂದಾಗಿ ಕುಸಿಯುತ್ತಿರುವುದನ್ನು ನಾವು ಈ ಸಂದರ್ಭದಲ್ಲಿ ಗಮನಿಸಬೇಕಾಗಿದೆ. ಬೃಹತ್ ಪ್ರತಿಮೆಗಳು, ಬೃಹತ್ ಸೇತುವೆಗಳು, ಬೃಹತ್ ಬುಲೆಟ್ ಟ್ರೈನ್‌ಗಳ ಅಬ್ಬರಗಳ ಮೂಲಕ ಭಾರತವನ್ನು ಕಟ್ಟುವ ಪ್ರಯತ್ನವನ್ನು ನಮ್ಮನ್ನಾಳುವವರು ನಡೆಸುತ್ತಿದ್ದಾರೆ. ಆದರೆ ಈ ಅಭಿವೃದ್ಧಿಯ ಜೊತೆಗೆ ದೇಶದ ಶ್ರೀಸಾಮಾನ್ಯರು ಸಂಬಂಧವನ್ನು ಕಳೆದುಕೊಳ್ಳುತ್ತಿದ್ದಾರೆ. ವಿಶ್ವದ ಇನ್ನಾರನ್ನೋ ಸೆಳೆಯುವ ಉದ್ದೇಶದಿಂದ ನಮ್ಮ ನಗರಗಳನ್ನು ಕಟ್ಟಲಾಗುತ್ತಿದೆ. ಇದೇ ಸಂದರ್ಭದಲ್ಲಿ ನಮ್ಮ ಜನರ ಹಸಿವು ಸಂಕಟಗಳಿಗೆ ಈ ಅಭಿವೃದ್ಧಿ ಕಿವುಡಾಗುತ್ತಿದೆ. ಈ ಅಭಿವೃದ್ಧಿಯ ತಳದಲ್ಲಿ ಸಿಲುಕಿಕೊಂಡಿರುವ ನಮ್ಮ ಜನರ ಬದುಕಿನ ಬಗ್ಗೆ ಸರಕಾರ ಯಾವುದೇ ಕಾಳಜಿಯನ್ನು ಹೊಂದಿಲ್ಲ. ಜನ ಸಾಮಾನ್ಯರ ಎದೆಯನ್ನು ಬೆಸೆಯಬೇಕಾದ ಸೇತುವೆಗಳೇ ಕುಸಿದ ಮೇಲೆ, ಪುರಾತನ ತೂಗು ಸೇತುವೆಯೊಂದು ಕುಸಿಯದೇ ಇರುವುದಾದರೂ ಹೇಗೆ?

Similar News