ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದಲ್ಲಿ 'ಪ್ರವರ್ಗ-1ಬಿ' ಜಾತಿಗೆ ಅನ್ಯಾಯ : ಡಿ.ಟಿ.ಶ್ರೀನಿವಾಸ್
ಸಾಂದರ್ಭಿಕ ಚಿತ್ರ | PC : x/grok
ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಮೀಸಲಾತಿಯನ್ನು ಶೇ.32 ರಿಂದ ಶೇ.51ಕ್ಕೆ ಹೆಚ್ಚಿಸಲು ಸರಕಾರಕ್ಕೆ ಶಿಫಾರಸು ಮಾಡಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದಲ್ಲಿ ಆರು ಪ್ರವರ್ಗಗಳಾಗಿ ಮರು ವರ್ಗೀಕರಿಸಲಾಗಿದ್ದು, 'ಪ್ರವರ್ಗ-1ಬಿ' ಜಾತಿಗೆ ಅನ್ಯಾಯವಾಗಿದೆ ಎಂದು ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ ಶ್ರೀನಿವಾಸ್ ಆಕ್ಷೇಪಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಜಿ.ಹಾವನೂರು, ವೆಂಕಟಸ್ವಾಮಿ, ಓ.ಚಿನ್ನಪ್ಪ ರೆಡ್ಡಿ, ರವಿವರ್ಮ ಕುಮಾರ್, ದ್ವಾರಕಾನಾಥ್ ಮತ್ತು ಶಂಕರಪ್ಪ ನೇತೃತ್ವದ ಆಯೋಗಗಳು ಮರುವರ್ಗೀಕರಣದಲ್ಲಿ ಇಂತಹ ಶಿಫಾರಸುಗಳನ್ನು ನೀಡಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಆಯೋಗವು 'ಕೆನೆಪದರ ನೀತಿ' ಹಾಗೂ ಆದಾಯ ಮಿತಿ ಅಳವಡಿಸುವುದನ್ನು ಶಿಫಾರಸು ಮಾಡಿರುವುದು, ಪ್ರವರ್ಗ-1ರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.24.1ರಷ್ಟು ಮೀಸಲಾತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಆದರೆ ಪ್ರವರ್ಗ-1ರ ಜಾತಿಗಳ ಪೈಕಿ ಅತೀ ಹಿಂದುಳಿದ 147 ಜಾತಿಗಳಿಗೆ ಕೆನೆಪದರ ನೀತಿಯನ್ನು ಅನ್ವಯಿಸಲು ಹಾಗೂ ಆದಾಯ ಮಿತಿಯನ್ನು ವಿಧಿಸಲು ಶಿಫಾರಸು ಮಾಡಲಾಗಿದೆ. ಈ ಕ್ರಮ ಅತಿ ಹಿಂದುಳಿದ ಸಮುದಾಯಗಳ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಅಲ್ಲದೆ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಪ್ರವರ್ಗ-1ರಲ್ಲಿ ಇರಿಸಿರುವುದೂ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದರು.