ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಆಲಿಸಲು ಜ.3ರಿಂದ ವಿಶೇಷ ಕಾರ್ಯಕ್ರಮ

Update: 2024-01-01 15:37 GMT

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು, ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಉಪಮಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜ.3ರಂದು ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನರು ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅವರ ಮನೆ ಬಾಗಿಲಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 28 ಕ್ಷೇತ್ರಗಳು ಬರಲಿದ್ದು, ವಲಯವಾರು 2 ಅಥವಾ 3 ವಿಧಾನಸಭಾ ಕ್ಷೇತ್ರಗಳನ್ನು ಒಗ್ಗೂಡಿಸಿ ಸದರಿ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಅದರಂತೆ, ಮೊದಲನೆ ಹಂತದಲ್ಲಿ ಮಹದೇವಪುರ, ಯಲಹಂಕ ಹಾಗೂ ಪೂರ್ವ ವಲಯ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಎರಡನೆ ಹಂತದಲ್ಲಿ ಉಳಿದ ಕ್ಷೇತ್ರಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು. ನಾಗರಿಕರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ತಮ್ಮ ಅಹವಾಲು, ಸಮಸ್ಯೆಗಳನ್ನು ನಿವೇದಿಸಿಕೊಳ್ಳಬಹುದಾಗಿದೆ. ನಾಗರಿಕರಿಗೆ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಹಾಗೂ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.

ಸಿಬ್ಬಂದಿಗೆ ತರಬೇತಿ: ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಸಮಗ್ರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ಸಾಫ್ಟ್‌ ವೇರ್ ನಲ್ಲಿ ದಾಖಲಿಸಲು ಪಾಲಿಕೆ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ನಾಗರಿಕರ ಸಂಪೂರ್ಣ ವಿವರ ಹಾಗೂ ಬಂದಂತಹ ದೂರುಗಳು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನು ಸಾಫ್ಟ್‌ ವೇರ್ ನಲ್ಲಿ ದಾಖಲಿಸಲು ವೈ-ಫೈ, ಗಣಕಯಂತ್ರ, ಪ್ರಿಂಟರ್ ಹಾಗೂ ಸ್ಕ್ಯಾನರ್ ಗಳ ವ್ಯವಸೆಯೊಂದಿಗೆ 15 ಕೌಂಟರ್ ಗಳನ್ನು ಸ್ಥಾಪಿಸಲಾಗಿರುತ್ತದೆ.

ಹೆಲ್ಪ್ ಡೆಸ್ಕ್: ಕಾರ್ಯಕ್ರಮದ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗಲು ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್)ವನ್ನು ಸ್ಥಾಪಿಸಲಾಗಿರುತ್ತದೆ. ಅಲ್ಲದೆ, ನಾಗರಿಕರಿಗೆ ಮಾಹಿತಿ ಒದಗಿಸುವ ನಾಮಫಲಕಗಳನ್ನು ಅಳವಡಿಸಲಾಗಿರುತ್ತದೆ.

ಟೋಕನ್ ವ್ಯವಸ್ಥೆ: ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ನಾಗರಿಕರು ಅಹವಾಲುಗಳನ್ನು ನೀಡಲು ಅನುವಾಗಲೆಂದು ಟೋಕನ್‍ಗಳನ್ನು ಪಡೆಯಲು 10 ಕೌಂಟರ್ ವ್ಯವಸ್ಥೆ ಮಾಡಲಾಗುತ್ತದೆ. ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನೇರವಾಗಿ ಭೇಟಿಯಾಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರನ್ನೂ ಆಹ್ವಾನಿಸಲಾಗಿದೆ.

ಒಂದೇ ಸೂರಿನಡಿ ವಿವಿಧ ಇಲಾಖೆಗಳು: ನಾಗರಿಕರ ಸಮಸ್ಯೆಗಳನ್ನು ಒಂದೇ ಸೂರಿನಡಿ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಇಲಾಖೆಗಳಾದ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ, ಬಿಎಂಆರ್ ಸಿಎಲ್ (ಮೆಟ್ರೋ), ಕೊಳಗೇರಿ ಅಭಿವೃದ್ಧಿ ಮಂಡಳಿ, ಪೊಲೀಸ್ ಇಲಾಖೆ, ಬಿಎಂಟಿಸಿ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಉಪಸ್ಥಿತರಿರಲಿದ್ದಾರೆ.

ಎಲ್ಲೆಲ್ಲಿ ಕಾರ್ಯಕ್ರಮ:

ಜ.3ಕ್ಕೆ ಐಟಿಐ ಕ್ರೀಡಾಂಗಣ, ದೂರವಾಣಿ ನಗರ, ಕೆ.ಆರ್.ಪುರ ಕ್ಷೇತ್ರ, ಕೆ.ಆರ್.ಪುರ, ಮಹದೇವಪುರ. ಆ.5ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಭವನ, ಯಲಹಂಕ ನ್ಯೂ ಟೌನ್. ಯಲಹಂಕ ಕ್ಷೇತ್ರ, ಬ್ಯಾಟರಾಯನಪುರ, ದಾಸರಹಳ್ಳಿ. ಜ.6ಕ್ಕೆ ಆರ್ ಬಿಎಎನ್‍ಎಮ್‍ಎಸ್ ಹೈಸ್ಕೂಲ್ ಮೈದಾನ, ಸೆಂಟ್ ಜಾನ್ಸ್ ರಸ್ತೆ, ಶಿವನ್ ಚೆಟ್ಟಿ ಗಾರ್ಡನ್. ಹೆಬ್ಬಾಳ ಕ್ಷೇತ್ರ. ಶಿವಾಜಿನಗರ, ಪುಲಕೇಶಿನಗರ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News