ಬೆಂಗಳೂರಿಗೆ ಕಂಪೆನಿ ಸೆಕ್ರೇಟರೀಸ್ ಪ್ರಾದೇಶಿಕ ಕಚೇರಿ ಮಂಜೂರಿಗೆ ಪ್ರಯತ್ನ: ಸಂಸದ ತೇಜಸ್ವಿ ಸೂರ್ಯ

Update: 2023-12-01 13:12 GMT

ಬೆಂಗಳೂರು: ಕೇಂದ್ರ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪೆನಿ ಸೆಕ್ರೇಟರೀಸ್‍ನ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರು ನಗರಕ್ಕೆ ಮಂಜೂರು ಮಾಡಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಶುಕ್ರವಾರ ನಗರದ ಹೋಟೆಲ್ ಕ್ಯಾಪಿಟಲ್‍ನಲ್ಲಿ ಅಯೋಜಿಸಿರುವ ಎಸ್‍ಐಆರ್ ಸಿ ಪ್ರಾದೇಶಿಕ ಕಾರ್ಪೋರೇಟ್ ಸಿಎಸ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಗರದಲ್ಲಿ ಅತಿ ಹೆಚ್ಚು ಮಂದಿ ಕಂಪೆನಿ ಸೆಕ್ರೇಟರಿಗಳಿದ್ದು, ಬೆಂಗಳೂರು ನಗರಕ್ಕೆ ಪ್ರಾದೇಶಿಕ ಕಚೇರಿಯನ್ನು ಮಂಜೂರು ಮಾಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಮನವಿ ಮಾಡಲಾಗುವುದು. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಪ್ರಾದೇಶಿಕ ಕೇಂದ್ರ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಬೆಂಗಳೂರು ನಗರ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದು, ನಗರಕ್ಕೆ ಅಗತ್ಯ ಮೂಲಸೌಕರ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಿನ್ನೆಡೆಯಾಗುತ್ತಿದೆ. ಮುಂದಿನ 25 ವರ್ಷಗಳಿಗೆ ಅನ್ವಯವಾಗುವಂತೆ ನಗರದ ಬೆಳಣಿಗೆಗೆ ಪೂರಕವಾಗಿರುವ ಯೋಜನೆಗಳನ್ನು ರೂಪಿಸುವ ಪ್ರತ್ಯೇಕ ಸಂಸ್ಥೆ ಇಲ್ಲ. ಬಿಡಿಎ, ಬಿಎಂಆರ್ ಡಿಎ, ಬಿಬಿಎಂಪಿ ಸೇರಿದಂತೆ ಯಾವುದೇ ಸಂಸ್ಥೆಗಳು ಬೆಂಗಳೂರು ಅಭಿವೃದ್ದಿಗೆ ನೀಲನಕ್ಷೆ ರೂಪಿಸುತ್ತಿಲ್ಲ. ಇದರಿಂದಾಗಿ ನಗರದಲ್ಲಿ ಸಮಸ್ಯೆಗಳು ತಲೆ ದೋರುತ್ತಿವೆ ಎಂದು ಅವರು ವಿಷಾದಿಸಿದರು.

ನಗರದ ಸಂಚಾರಿ ವ್ಯವಸ್ಥೆ ಸುಧಾರಿಸಲು ಸೇತುವೆ, ಮೇಲ್ಸೇತುವೆ, ಸುರಂಗಗಳ ನಿರ್ಮಾಣ. ರಸ್ತೆಗಳ ಅಗಲೀಕರಣದಿಂದ ಸಾಧ್ಯವಿಲ್ಲ. ಜಗತ್ತಿನ ಬೇರೆ ಬೇರೆ ನಗರಗಳ ಅನುಭವವನ್ನು ನೋಡಿದರೆ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆಯೇ ಇದಕ್ಕೆ ಮದ್ದು. ಮುಂದಿನ 2 ವರ್ಷಗಳಲ್ಲಿ ಆಡುಗೋಡಿಯ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲಿನ ಮೂಲಕ 40 ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದು ಹೇಳಿದರು.

ನಾವೀಗ ಅತ್ಯುತ್ತಮ ಯುಗದಲ್ಲಿ ವಾಸವಾಗಿದ್ದು, ನೆರೆಯ ಪಾಕಿಸ್ತಾನ, ಆಫ್ಘಾನಿಸ್ತಾನ ಸಂಕಷ್ಟದಲ್ಲಿದೆ. ಶ್ರೀಲಂಕಾ ದಿವಾಳಿಯಾಗಿದ್ದು, ಉಕ್ರೇನ್, ರಷ್ಯಾದಲ್ಲಿ 18 ರಿಂದ 19 ವರ್ಷದ ಯುವ ಸಮೂಹವನ್ನು ಬಲವಂತವಾಗಿ ಯುದ್ಧ ಮಾಡಲು ದೂಡಲಾಗುತ್ತಿದೆ. ಮಧ್ಯ ಪ್ರಾಚ್ಯದಲ್ಲೂ ಸಂಘರ್ಷದ ವಾತಾವರಣವಿದ್ದು, ಆದರೆ ಪ್ರಧಾನಿ ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತವಾಗಿದೆ. 9 ವರ್ಷಗಳ ಹಿಂದೆ ಶೇ.50ರಷ್ಟು ಜನರಿಗೆ ಬ್ಯಾಂಕ್ ಖಾತೆ ಇರಲಿಲ್ಲ. ಆದರೆ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯನ್ನು ಅತ್ಯಂತ ಸುಸಜ್ಜಿತಗೊಳಿಸಲಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದ ಅಧ್ಯಕ್ಷ ಮನೀಶ್ ಗುಪ್ತಾ ಮಾತನಾಡಿ, ಸೇನೆಯಲ್ಲಿ ಕಾರ್ಯನಿರ್ವಹಿಸಿದ ಅಗ್ನಿವೀರರಿಗೆ ಉಚಿತವಾಗಿ ಕಂಪೆನಿ ಸೆಕ್ರೇಟರೀಸ್ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಬೆಂಗಳೂರಿನ ಕಂಪೆನಿ ಸೆಕ್ರೇಟರೀಸ್ ಕಚೇರಿಯ ಎರಡನೇ ಮಹಡಿಯಲ್ಲಿ ಮಧ್ಯಸ್ಥಿಕೆ ಕೇಂದ್ರ ಆರಂಭಿಸಲಾಗುವುದು. ಇದರಿಂದ ಸಾಂಸ್ಥಿಕ ವಲಯದ ವ್ಯಾಜ್ಯಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News