ಬೆಂಗಳೂರು | ಕ್ಯಾಂಟರ್ ಚಾಲಕನ ಅಜಾಗರೂಕತೆಗೆ ಇಬ್ಬರು ಮೃತ್ಯು

Update: 2024-08-17 17:06 GMT

ಬೆಂಗಳೂರು: ಕ್ಯಾಂಟರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ವರದಿಯಾಗಿದೆ.

ಶಾಹಿಬ್ ರಾಝಾ(21), ರೆಹಾನ್ ರಾಝಾ(14) ಎಂಬುವರು ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಇಬ್ಬರು ಬನಾರಸ್ ಮೂಲದವರಾಗಿದ್ದು, ಈ ಸಂಬಂಧ ಕ್ಯಾಂಟರ್ ಚಾಲಕ ಸುರೇಶ್ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ನಗರದ ಸ್ಯಾಟಲೈಟ್ ಸಮೀಪದ ಹೊಸಗುಡ್ಡದಹಳ್ಳಿ ಸಮೀಪ ಶನಿವಾರ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಶಾಹಿಬ್ ರಾಝಾ ಮತ್ತು ರೆಹಾನ್ ರಾಝಾ ಎಂಬ ಇಬ್ಬರು ಬರುತ್ತಿದ್ದರು. ಈ ವೇಳೆ ಹಾಲೋಬ್ಲಾಕ್ ತುಂಬಿದ್ದ ಕ್ಯಾಂಟರ್ ವಾಹನ ತಗ್ಗು ಪ್ರದೇಶದಲ್ಲಿ ನಿಲ್ಲಿಸಿದ್ದರಿಂದ ಏಕಾಏಕಿ ಚಲಿಸಿದ್ದು, ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ.

ಈ ವೇಳೆ ಇಬ್ಬರು ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದು, ಟೈರ್ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇದೇ ರಸ್ತೆಯಲ್ಲಿ ಮನೆಯೊಂದರ ಕಾಮಗಾರಿ ನಡೆಯುತ್ತಿದ್ದರಿಂದ ಬೇಕಾಗುವ ಹಾಲೋಬ್ಲಾಕ್ ಕಲ್ಲುಗಳನ್ನು ಇದೇ ಕ್ಯಾಂಟರ್‌ ನಲ್ಲಿ ತರಿಸಲಾಗಿತ್ತು. ಇಳಿಜಾರು ಇದ್ದ ಕಾರಣಕ್ಕೆ ಕ್ಯಾಂಟರ್ ಮುಂದಕ್ಕೆ ಚಲಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News