ಬೆಂಗಳೂರು | ಹೆಂಡತಿಯನ್ನು ಕೊಲೆಗೈದು ಗಂಡನೂ ಆತ್ಮಹತ್ಯೆಗೆ ಯತ್ನ : ಪ್ರಕರಣ ದಾಖಲು

Update: 2024-08-28 13:09 GMT

ಬೆಂಗಳೂರು : ಹೆಂಡತಿಯ ನಡತೆ ಶಂಕಿಸಿ ಕತ್ತು ಕೊಯ್ದು ಕೊಲೆಗೈದ ಗಂಡನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಬಂಧ ಇಲ್ಲಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋದಿ ಗ್ರೌಂಡ್ ಸಮೀಪದ ಅರುಣಾಚಲಂ ಲೇಔಟ್ ನಿವಾಸಿ ನವ್ಯಾಶ್ರೀ(26) ಕೊಲೆಯಾದ ಮಹಿಳೆಯಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ ಗಂಡ ಕಿರಣ್‍ಕುಮಾರ್(30) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೂರು ವರ್ಷದ ಹಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಕಿರಣ್‍ಕುಮಾರ್ ಟ್ಯಾಕ್ಸಿ ಚಾಲಕನಾಗಿದ್ದನು. ಈ ನಡುವೆ ತನ್ನ ಹೆಂಡತಿ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗಂಡ ಕಿರಣ್‍ಕುಮಾರ್ ಆಗಾಗ್ಗೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ. ಕೆಲವು ದಿನಗಳಿಂದ ಕಿರಣ್‍ಕುಮಾರ್ ಮನೆಗೆ ಬಂದಿರಲಿಲ್ಲ. ಆ.27ರಂದು ಮನೆಗೆ ಬಂದು ಮತ್ತೊಂದು ಕೀ ಸಹಾಯದಿಂದ ಬೀಗ ತೆಗೆದು ಮನೆಯೊಳಗೆ ಬಚ್ಚಿಟ್ಟುಕೊಂಡಿದ್ದಾನೆ.

ಸ್ನೇಹಿತೆಯೊಂದಿಗೆ ಹೊರಗಡೆ ಹೋಗಿದ್ದ ನವ್ಯಾಶ್ರೀ ಆಕೆಯನ್ನು ಕರೆದುಕೊಂಡು ಮನೆಗೆ ಬಂದು ಕೀ ತೆಗೆದಿದ್ದಾಳೆ. ನಂತರ ಆಕೆಯ ಸ್ನೇಹಿತೆ ರೂಮ್‍ನಲ್ಲಿ ಮಲಗಿದ್ದಾರೆ. ನವ್ಯಾಶ್ರೀ ಮನೆಯ ಹಾಲ್‍ನಲ್ಲಿ ಬಂದು ಪ್ರಿಯಕರನ ಜೊತೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಬಚ್ಚಿಟ್ಟುಕೊಂಡಿದ್ದ ಪತಿ ಕಿರಣ್‍ಕುಮಾರ್ ಎದ್ದುಬಂದು ಜಗಳವಾಡಿದ್ದಾನೆ ಎನ್ನಲಾಗಿದೆ.

ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ಹಾರೆಯಿಂದ ತಲೆಗೆ ಹೊಡೆದು ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯದ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಿರಣ್‍ಕುಮಾರ್‌ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News