ಬೆಂಗಳೂರು | ತಾಯಿಯನ್ನು ನಿಂದಿಸಿದ ವ್ಯಕ್ತಿಯನ್ನು ಕೊಲೆಗೈದ ಮಗ

Update: 2024-06-16 13:17 GMT

ಬೆಂಗಳೂರು : ತಾಯಿಯನ್ನು ವ್ಯಕ್ತಿಯೋರ್ವ ನಿಂದಿಸಿದ ಎನ್ನುವ ಕಾರಣಕ್ಕೆ ಕೋಪಗೊಂಡ ಮಗ ಆತನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಇಲ್ಲಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಜೂ.15ರ ಶನಿವಾರ ರಾತ್ರಿ 9.30ರ ಸುಮಾರಿಗೆ ಕೂಡ್ಲು ಗ್ರಾಮದ ಸಾಯಿ ಮೆಡೋಸ್ ಲೇಔಟ್‍ನ ಸುಭಾಷ್ ಚಂದ್ರ ಬೋಸ್ ರಸ್ತೆಯಲ್ಲಿರುವ ಲೋಕನಾಥ ಎಂಬುವರ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆ ನಡೆದಿದೆ. 37 ವರ್ಷದ ಕೃಷ್ಣೋಜಿರಾವ್ ಕೊಲೆಯಾದ ಕಟ್ಟಡ ಕಾರ್ಮಿಕ ಎಂದು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಕೃಷ್ಣೋಜಿರಾವ್ ಅವರೊಂದಿಗೆ ರಾಜೇಶ್ವರಿ ಎಂಬವರು ನಿರ್ಮಾಣ ಹಂತದ ಮೊದಲ ಮಹಡಿಯಲ್ಲಿ ವಾಸವಿದ್ದರು. ಶನಿವಾರ ಕೃಷ್ಣೋಜಿರಾವ್‌ಗೆ ಕೂಲಿ ಹಣ ಬಂದಿತ್ತು. ಈ ವಿಷಯಕ್ಕೆ ರಾಜೇಶ್ವರಿ ಮತ್ತು ಕೃಷ್ಣೋಜಿರಾವ್ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ನಡೆಯುತ್ತಿದ್ದಾಗ ರಾಜೇಶ್ವರಿ ಅವರ ಮಗ ಶಿವಕುಮಾರ್ ಸ್ಥಳಕ್ಕೆ ಬಂದಿದ್ದಾನೆ. ಈ ವೇಳೆ ತಾಯಿಯ ಮೇಲೆ ಹಲ್ಲೆ ಮಾಡಿರುವುದನ್ನು ಕಂಡಿದ್ದಾನೆ.

ಇದರಿಂದ ಕೋಪಗೊಂಡ ಶಿವಕುಮಾರ್ ದೊಣ್ಣೆಯಿಂದ ಹೊಡೆದು ಕೃಷ್ಣೋಜಿರಾವ್ ನನ್ನು ಕೊಲೆ ಮಾಡಿದ್ದಾನೆ ಎಂದು ಕಟ್ಟಡದ ಮಾಲಕ ಸುರೇಶ್ ಆರೋಪಿಸಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News