ಬೆಂಗಳೂರು : 26 ವರ್ಷಗಳ ಬಳಿಕ ಸರಗಳ್ಳತನ ಪ್ರಕರಣದ ಆರೋಪಿ ಸೆರೆ

Update: 2024-02-11 13:08 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 26 ವರ್ಷಗಳ ಬಳಿಕ ಇಲ್ಲಿನ ಜಯನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಗುಲಾಬ್ ಖಾನ್(50) ಎಂಬಾತನನ್ನು ರಾಮನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

20 ಜನವರಿ 1998ರಲ್ಲಿ 24ನೇ ವಯಸ್ಸಿನಲ್ಲಿದ್ದಾಗ ಜಯನಗರ 5ನೇ ಬ್ಲಾಕ್‍ನಲ್ಲಿ ವಸಂತ ಎಂಬ ಮಹಿಳೆಯ ಸರ ಕದ್ದಿದ್ದ ಆರೋಪಿ ಗುಲಾಬ್ ಖಾನ್, ನಂತರ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದ. ಕೃತ್ಯ ಎಸಗಿದ ಬಳಿಕ ಯಾವುದೇ ಬೇರೆ ಪ್ರಕರಣದಲ್ಲೂ ಭಾಗಿಯಾಗದೆ ರಾಮನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡು ನೆಲೆಸಿದ್ದ ಎನ್ನಲಾಗಿದೆ.

ಈ ಘಟನೆ ನಡೆದು 26 ವರ್ಷ ಕಳೆದರೂ ಆರೋಪಿ ಪತ್ತೆಯಾಗದ ಕಾರಣ ಪ್ರಕರಣ ಕೈಬಿಡಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪತ್ತೆಯಾಗದ ಹಳೆಯ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಜಯನಗರ ಪೊಲೀಸರು ಅಂತಿಮ ಪ್ರಯತ್ನದಲ್ಲಿ ಆರೋಪಿಯ ಜಾಡು ಬೆನ್ನತ್ತಿದ್ದರು. ಆಗ ರಾಮನಗರದಲ್ಲಿ ನೆಲೆಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮರು ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News