ವೈದ್ಯರಿಗೆ ಅಗತ್ಯ ಸೌಕರ್ಯ ಒದಗಿಸಿಕೊಡಲು ಸರಕಾರ ಬದ್ಧ : ಸಚಿವ ದಿನೇಶ್ ಗುಂಡೂರಾವ್

Update: 2024-07-01 16:59 GMT

ಬೆಂಗಳೂರು : ವೈದ್ಯರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಲು ಸರಕಾರ ಬದ್ಧವಾಗಿದೆ. ಒಂದು ಸರಕಾರವಾಗಿ ವೈದ್ಯರನ್ನು ನಾವು ಚೆನ್ನಾಗಿ ನೋಡಿಕೊಂಡರೆ, ನಮ್ಮ ಜನರ ಆರೋಗ್ಯವನ್ನು ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವೈದ್ಯರನ್ನು ದೈವತ್ವಕ್ಕೆ ಹೊಲಿಸಿರುವುದರ ಹಿನ್ನೆಲೆ ಇದೊಂದು ಸೇವಾ ಮನೋಭಾವದ ಕಾರ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ನಮ್ಮ ಸರಕಾರ ಬಂದ ಬಳಿಕ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುವ ಪ್ರಯತ್ನ ಮಾಡಿದ್ದೇವೆ. ಆರಂಭದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಔಷಧಿಯೇ ಸರಬರಾಜು ಆಗುತ್ತಿರಲಿಲ್ಲ. ಶೇ.30ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿ ಪೂರೈಕೆಯಾಗುತ್ತಿತ್ತು. ಇದೀಗ ಸಾಕಷ್ಟು ಸುಧಾರಣೆ ತಂದಿದ್ದು, ಶೇ.80ರಷ್ಟು ಔಷಧಿ ಸರಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದೆ. ಮುಂಬರುವ ಎರಡು ತಿಂಗಳೊಳಗೆ ಸಂಪೂರ್ಣವಾಗಿ ಔಷಧಿ ಸರಬರಾಜನ್ನು ಸರಿಪಡಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

30 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಪರಿಷ್ಕರಣೆ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳ ಒಳಗಾಗಿ ಜಾರಿಗೆ ಬರಲಿದೆ. ವಿಶೇಷವಾಗಿ 8 ವರ್ಷಗಳ ಬಳಿಕ ಆರೋಗ್ಯ ಇಲಾಖೆ ವರ್ಗಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಕೌನ್ಸಿಲಿಂಗ್ ಮೂಲಕ ನಡೆಸಲಾಗುತ್ತಿದ್ದು, ಪಾರದರ್ಶಕ ಆಡಳಿತವನ್ನು ಇಲಾಖೆಯಲ್ಲಿ ತರಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಡಯಾಲಿಸಿಸ್ ವ್ಯವಸ್ಥೆಯನ್ನು ಸದೃಢಗೊಳಿಸಲಾಗಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಇಂದು ಹಠಾತ್ ಹೃದಯಘಾತಕ್ಕೆ ಒಳಗಾಗುವವರ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ನಮ್ಮ ವೈದ್ಯರು ಮನಸ್ಸು ಮಾಡಿದರೆ ರಾಜ್ಯದ ಬಡವರು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬಹುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಬಿ.ಸಿ.ರಾಯ್ ಅವರು ಪಶ್ಮಿಮ ಬಂಗಾಳ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಅವರ ವೃತ್ತಿ ಮರೆತಿರಲಿಲ್ಲ. ಅವರ ಜನ್ಮದಿನದಂದು ಆಚರಿಸುವ ವೈದ್ಯರ ದಿನಾಚರಣೆ ಎಲ್ಲ ವೈದ್ಯರಿಗೆ ಪ್ರೇರಣೆಯಾಗಲಿ. ಇನ್ನೂ ಹೆಚ್ಚು ಸೇವಾ ಮನೋಭಾವದೊಂದಿಗೆ ವೈದ್ಯರು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತಾಗಲಿ ಎಂದು ಗುಂಡೂರಾವ್ ಆಶಯ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News