ಕಾಂಗ್ರೆಸ್ ಪಕ್ಷವು ಶಿಕ್ಷಕರ ಜತೆ ನಿಲ್ಲಲಿದೆ : ಡಿ.ಕೆ.ಶಿವಕುಮಾರ್

Update: 2024-09-05 14:18 GMT

PC : x/@DKShivakumar

ಬೆಂಗಳೂರು : ‘ತ್ರೇತಾಯುಗದಲ್ಲಿ ಜಂಗಿಸಿ ವಿದ್ಯೆ ಕಲಿಸುತ್ತಿದ್ದರು, ದ್ವಾಪರ ಯುಗದಲ್ಲಿ ದಂಡಿಸಿ ವಿದ್ಯೆ ಕಲಿಸುತ್ತಿದ್ದರು. ಆದರೆ, ಕಲಿಯುಗದಲ್ಲಿ ಗುರು ಶಿಷ್ಯರಿಗೆ ವಂದಿಸಿ ವಿದ್ಯೆ ಕಲಿಸುವಂತಾಗಿದೆ. ಹೀಗಾಗಿ ಈ ಕಾಲಘಟ್ಟದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಶಿಕ್ಷಕರ ಜತೆ ನಿಲ್ಲಲಿದೆ. ನೀವು ಪಕ್ಷದ ಆಧಾರಸ್ತಂಭ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನ, ರಾಜೀವ್ ಗಾಂಧಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜನ ರಾಜಕಾರಣಿಗಳನ್ನು ಬೇಗ ಮರೆಯುತ್ತಾರೆ. ಆದರೆ, ಗುರುಗಳನ್ನು ಬೇಗ ಮರೆಯುವುದಿಲ್ಲ. ಅವರಿಗೆ ನೀಡಬೇಕಾದ ಗೌರವ ನೀಡಲಾಗುವುದು. ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರನ್ನು ಮರೆಯುವುದಿಲ್ಲ ಎಂದು ನುಡಿದರು.

ಶಿಕ್ಷಕರ ಮೇಲೆ ವಿಶೇಷ ನಂಬಿಕೆ ವಿಶ್ವಾಸ ಇರುತ್ತದೆ. ಮಕ್ಕಳು ಮನೆಯಲ್ಲಿ ತಂದೆ ತಾಯಿ ಮಾತು ಕೇಳದಿದ್ದರೂ ಶಿಕ್ಷಕರು ಹೇಳಿದ್ದನ್ನು ಕೇಳುತ್ತಾರೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಅನೇಕ ಬಾರಿ ಹೇಳಿದ್ದೇನೆ. ನಾನು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. 47ನೆ ವಯಸ್ಸಿಗೆ ಪದವಿ ಪಡೆದೆ. ಶಿಕ್ಷಣದ ಬೆಲೆ ನನಗೆ ಅರಿವಿದೆ ಎಂದು ಅವರು ತಿಳಿಸಿದರು.

ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಬಂಗಾರಪ್ಪ, ರಾಮಕೃಷ್ಣ ಹೆಗಡೆ, ನಂಜೇಗೌಡರು ಸೇರಿದಂತೆ ಅನೇಕ ಮಹಾನುಭಾವರು ಇದ್ದರು. ಅವರ ಮಾತು, ವಿಚಾರ ನೋಡಿದಾಗ ಸರಿಯಾದ ಶಿಕ್ಷಣ ಇಲ್ಲದೆ ನಾವು ಸದನಕ್ಕೆ ಬರಬಾರದು ಎಂದು ನನಗೆ ಅನಿಸಿತು. ಐಟಿ-ಬಿಟಿ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಕೊಡುಗೆಯಿಂದ ಇಂದು ನಮಗೆ ದೊಡ್ಡ ಶಕ್ತಿ ಬಂದಿದ್ದು, ಫೋನ್‍ನಲ್ಲಿ ನಮಗೆ ಎಲ್ಲ ಮಾಹಿತಿ ಸಿಗಲಿದೆ. ಈಗ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಶಿಕ್ಷಣ ನೀಡಬೇಕು ಎಂದರು.

ಕರ್ನಾಟಕ ದೇಶದಲ್ಲೇ ಉನ್ನತ ಶಿಕ್ಷಣ ವ್ಯವಸ್ಥೆ ಇದೆ. ಇಲ್ಲಿ ಓದಿದ ಎಂಜಿನಿಯರ್, ವೈದ್ಯರು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಇಂತಹ ಶಿಕ್ಷಣ ವ್ಯವಸ್ಥೆ ಇದೆ. ಶಿಕ್ಷಣದಲ್ಲಿ ಏನಾದರೂ ಬದಲಾವಣೆ ತರಬೇಕೆಂದು ತೀರ್ಮಾನಿಸಿದ್ದೇನೆ. ಪಂಚಾಯ್ತಿ ಮಟ್ಟದಲ್ಲಿ ಸರಕಾರದ ಹಣ ವಿನಿಯೋಗಿಸದೆ ಸಿಎಸ್‍ಆರ್ ನಿಧಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಶಾಲೆಗಳನ್ನು ಖಾಸಗಿ ಶಾಲೆಯವರು ಜವಾಬ್ದಾರಿ ವಹಿಸಿಕೊಂಡು ಶಿಕ್ಷಕರ ಕೊರತೆ ಇದ್ದರೆ ಶಿಕ್ಷಕರನ್ನು ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿಶೇಷ ಯೋಜನೆ ಮಾಡಲಾಗಿದೆ ಎಂದರು.

10ನೆ ತರಗತಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಲಕಿ ಮೊದಲ ಸ್ಥಾನ ಪಡೆದಿದ್ದಾಳೆ. ಗ್ರಾಮೀಣ ಭಾಗದ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡುವ ಸಾಮರ್ಥ್ಯ ವಿದ್ದು ಅವರಿಗೆ ನಾವು ಪ್ರೊತ್ಸಾಹ, ಉತ್ತೇಜನ ನೀಡಬೇಕು. ಪಕ್ಷದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಿಕ್ಷಣ ಕ್ಷೇತ್ರದಿಂದ ನಮ್ಮ ಪಕ್ಷದಲ್ಲಿ ಪ್ರತಿನಿಧಿಗಳು ಇದ್ದಾರೆ. ಈಗ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ ಎಂದರು.

‘ರಾಜ್ಯದಲ್ಲಿ 8,800 ಕೋಟಿ ರೂ.ಸಿಎಸ್‍ಆರ್ ನಿಧಿಯನ್ನು ಮುಂದಿನ ಮೂರು-ನಾಲ್ಕು ವರ್ಷ ಶಾಲೆಗಳ ನಿರ್ಮಾಣ ಸೇರಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವಂತೆ ಮನವಿ ಮಾಡಲಾಗಿದೆ. ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ನಮ್ಮ ಹಳ್ಳಿಯ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಶಕ್ತಿ ತುಂಬಲಾಗುವುದು

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News