ಕನಕಪುರ ಕ್ಷೇತ್ರಕ್ಕೆ 400 ಕೋಟಿ ರೂ. ಅನುದಾನ : ಡಿ.ಕೆ.ಶಿವಕುಮಾರ್

Update: 2025-03-09 22:15 IST
ಕನಕಪುರ ಕ್ಷೇತ್ರಕ್ಕೆ 400 ಕೋಟಿ ರೂ. ಅನುದಾನ : ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು : ‘ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ-ತಂದೆ, ಗ್ಯಾರಂಟಿಗಳೇ ಬಂಧು-ಬಳಗ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಕನಕಪುರ ಕ್ಷೇತ್ರಕ್ಕೆ ಸುಮಾರು 400 ಕೋಟಿ ರೂ.ಗಳಷ್ಟು ಅನುದಾನ ತಂದಿದ್ದೇನೆ. ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ-ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. 250 ಕೋಟಿ ರೂ.ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿವೆ ಎಂದು ಹೇಳಿದರು.

‘ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದ ವರೆಗೆ ಸುಮಾರು 13 ಕೋಟಿ ರೂ.ವೆಚ್ಚದಲ್ಲಿ ರಸ್ತೆ, ದೊಡ್ಡಆಲಹಳ್ಳಿಯಿಂದ ಕಬ್ಬಾಳಿನ ತನಕ 40 ಕೋಟಿ ರೂ. ವೆಚ್ಚದಲ್ಲಿ 14.5 ಕಿಮೀ ಉದ್ದದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ ಎಂದು ಅವರು ಹೇಳಿದರು.

‘ಕನಕಪುರ, ಸಾತನೂರು, ದೊಡ್ಡಆಲಹಳ್ಳಿ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ನಗುತ್ತಿದ್ದರು. ಆದರೆ, ಇಂದು ಆ ಕೆಲಸವನ್ನು ಮಾಡಿ ತೋರಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ 135 ಕೋಟಿ ರೂ., ಹೊಸಕೆರೆ ತುಂಬಿಸಲು 108 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ನಲ್ಲಳ್ಳಿ- ಮುಲ್ಲಳ್ಳಿ ಸಂಪರ್ಕ ಸೇತುವೆಗೆ 11 ಕೋಟಿ ರೂ., ಅರ್ಕಾವತಿಯಿಂದ ನೀರನ್ನು ಎತ್ತಿ ದೊಡ್ಡಆಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು 70 ಕೋಟಿ ರೂ.ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ 8 ಗ್ರಾಮಗಳ 2 ಸಾವಿರ ಎಕರೆ ಭೂಮಿಗೆ ಉಪಯೋಗವಾಗಲಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕೊಕ್ಕರೆ ಹೊಸಹಳ್ಳಿ ಬಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 10ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ: ನನ್ನ ಕ್ಷೇತ್ರದಲ್ಲಿ ಎಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವೋ ಅಷ್ಟು ಕೆರೆಗಳನ್ನು ತುಂಬಿಸುತ್ತೇನೆ. ಹಂತ-ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ. ಅಧಿಕಾರ ಅವಧಿಯಲ್ಲಿ ಎಲ್ಲ ಕಡೆ ನೀರು ತುಂಬಿ ಹರಿಯಬೇಕು. ಚನ್ನಪಟ್ಟಣ, ರಾಮನಗರ, ಮಾಗಡಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಲಾಗಿದೆ. ಅಲ್ಲಿನ ಜನಕ್ಕೂ ನಾನು ಕೆಲಸ ಮಾಡಿಸುವುದಾಗಿ ಮಾತು ಕೊಟ್ಟಿದ್ದೇನೆ ಎಂದರು.

‘ಮೇಕೆದಾಟು ಕಚೇರಿ ಪ್ರಾರಂಭ ಮಾಡಲಾಗಿದ್ದು, ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಅಂದಾಜು ಮಾಡಲು ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಕೆಲಸ ಪ್ರಾರಂಭ ಮಾಡಿದ್ದಾರೆ. ಕಾವೇರಿ ನದಿಯಿಂದ ನೀರನ್ನು ತಂದು ಜನರ ಬದುಕನ್ನು ಬದಲಾವಣೆ ಮಾಡುವ ದೊಡ್ಡ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ ಆತ ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ ಎನ್ನುವುದು ಮುಖ್ಯ. ಕೆರೆ ತುಂಬಿಸುವ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗುತ್ತದೆ. ಅಂತರ್ಜಲ ಹೆಚ್ಚುತ್ತದೆ, ಭೂಮಿ ಸದಾ ಹಸಿರಾಗಿ ಇರುತ್ತದೆ. ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ ಎಂದು ಅವರು ನುಡಿದರು.

ಚೀನಾದಿಂದ ರೇಷ್ಮೆಯ ಆಮದು ಕಡಿಮೆಯಾಗಿದೆ. ಆದ ಕಾರಣಕ್ಕೆ ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ಅದಕ್ಕೆ ಯಾರೂ ಭೂಮಿಯನ್ನು ಮಾರಾಟ ಮಾಡಲು ಹೋಗಬೇಡಿ. ಮುಂದಕ್ಕೆ ನಿಮ್ಮ ಭೂಮಿಯ ಬೆಲೆ ಹೆಚ್ಚಲಿದೆ. ಶಿಡ್ಲಘಟ್ಟ ಭಾಗದಲ್ಲಿ ನಮಗಿಂತ ಹೆಚ್ಚು ರೇಶ್ಮೆ ಬೆಳೆಯುತ್ತಿದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಅನ್ನು ಕೋಲಾರ ಭಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದರು.

‘ದೇವೆಗೌಡ ಹಾಗೂ ಕುಮಾರಸ್ವಾಮಿ ಅವರು ಸಾತನೂರು ಹೋಬಳಿಯನ್ನು ರಾಮನಗರಕ್ಕೆ ಸೇರಿಸಲು ಹೊರಟಿದ್ದರು. ಕನಕಪುರದಲ್ಲಿಯೇ ಸಾತನೂರನ್ನು ಉಳಿಸಿಕೊಳ್ಳಬೇಕೆಂದು ಸ್ಥಳೀಯ ಮುಖಂಡರಿಂದ ದೊಡ್ಡ ಹೋರಾಟ ನಡೆದ ಕಾರಣಕ್ಕೆ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕ್ಷೇತ್ರ ಪುನರ್ ವಿಂಗಡಣೆ ವೇಳೆ ಎಸ್.ಎಂ.ಕೃಷ್ಣ ಹಾಗೂ ಕುಲದೀಪ್ ಸಿಂಗ್‍ರ ಪ್ರಯತ್ನದ ಫಲವಾಗಿ ಈ ಹೋಬಳಿ ಕನಕಪುರದಲ್ಲಿಯೇ ಉಳಿಯಿತು ಎಂದು ಹೇಳಿದರು.

ರೈತರ ಬದುಕನ್ನು ಹಸನು ಮಾಡಬೇಕು ಎಂದು ಸರಕಾರದ ಮೇಲೆ ಪ್ರಭಾವ ಬೀರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಅಂದಿನ ಹೋಬಳಿ ಉಳಿಸಿ ಹೋರಾಟ ಇಂದಿಗೆ ಫಲ ಕೊಟ್ಟಿದೆ. ಕ್ಷೇತ್ರದ ವಿದ್ಯಾವಂತ ಯುವಕರಿಗೆ ಅನೇಕ ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಡಿಸಲಾಗಿದೆ. ಇನ್ನೂ ಬಾಕಿ ಇದ್ದರೆ ಅವರಿಗೂ ಕೆಲಸ ಕೊಡಿಸಲಾಗುವುದು ಎಂದರು.



Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News