ನನ್ನನ್ನು ಸಮಾಜಮುಖಿಯಾಗಿಸಿದ್ದು ತತ್ವಪದ, ಶರಣ ಸಂಸ್ಕೃತಿ: ಡಾ.ಮೀನಾಕ್ಷಿ ಬಾಳಿ

ಬೆಂಗಳೂರು: ತತ್ವಪದಗಳು ಮತ್ತು ವಚನ ಸಾಹಿತ್ಯವು ನನ್ನ ವ್ಯಕ್ತಿತ್ವದ ಮಜಲನ್ನು ಪೂರ್ಣವಾಗಿ ಬದಲಾಯಿಸುವುದರ ಜೊತೆಗೆ ಒಟ್ಟಾರೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಜನಮುಖಿ ಲೇಖಕಿ ಡಾ.ಮೀನಾಕ್ಷಿ ಬಾಳಿ ತಿಳಿಸಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಬಾಲ್ಯವನ್ನು ಒಳಗೊಂಡಂತೆ ಹಲವು ಹಂತದ ಶಿಕ್ಷಣ ಪಡೆದ ನಂತರವು ತತ್ವ್ವಪದಕಾರರು, ಶರಣ ಸಂಸ್ಕೃತಿ ಗಾಢ ಪ್ರಭಾವ ಬೀರಿತು. ಸಮಾಜಮುಖಿಯಾಗಿ ಪಾಲ್ಗೊಳ್ಳುವಂತೆ ಪ್ರೇರಣೆಯಾಯಿತು ಎಂಬುದೇ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಶಾಲಾ ವ್ಯಾಸಂಗ ಸಮಯದಲ್ಲಿಯೇ ಭಾಷಣ ಮಾಡಲು ಪ್ರಾರಂಭಿಸಿದೆ. ಭಜನೆ, ಮಠಗಳಲ್ಲಿ ಹಿತವಚನಗಳನ್ನು ಸಾಕಷ್ಟು ಸಮಯವನ್ನು ಹೀಗೆ ಮೀಸಲಿಡುತ್ತಾ ಬರುವುದರ ಜೊತೆಗೆ ಹಲವು ಬಗೆಯಲ್ಲಿ ಚಿಂತನೆ ಮಾಡುವುದನ್ನು ಪ್ರಯತ್ನಿಸಿದೆ. ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳು, ಬೈನೂರು ಕೃಷ್ಣನವರ ಪದಗಳು, ನಿಂಬರಗಿ ಮಹಾರಾಜರು ಹೀಗೆ ತತ್ವಪದಕಾರರ ಹಾಡುಗಳನ್ನು ಕೇಳುತ್ತಾ ಇಂತಹವುಗಳನ್ನು ಪುಸ್ತಕ ರೂಪದಲ್ಲಿ ತರಬೇಕೆಂಬ ಹಲವು ವರ್ಷಗಳು ಪ್ರಯತ್ನಿಸಿದೆ. ನಂತರ ಕೆಲವರ ಸಹಕಾರದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದಾದೆವು ಎಂದರು.
ಹುಟ್ಟಿದ್ದು ವಿಜಯಪುರ ಜಿಲ್ಲೆ ಸಿಂದಗಿಯಾದರೂ, ನೆಲೆ ನಿಂತು ಬದುಕು ರೂಪಿಸಿಕೊಂಡಿದ್ದು ಬಿಸಿಲೂರು ಕಲಬುರಗಿಯಲ್ಲಿ. ಹೆಣ್ಣಾಗಿ ನಾನು ಹಲವು ಸಂಕೋಲೆಗಳ ನಡುವೆಯೇ ಶಿಕ್ಷಣ ಹಠದಿಂದ ಪಡೆದೆ. ಉನ್ನತ ವ್ಯಾಸಂಗ ಪೂರೈಸಿದ ನಂತರ ಅನಿಸಿದ್ದು ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಚಿಂತಿಸಿದ್ದುಂಟು. ಗಮನಿಸಬೇಕಾದ ಸಂಗತಿ ಎಂದರೆ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಲೇ ಬಂದಿದೆ. ಆದರೆ ಇದುವರೆಗೂ ಈ ಭಾಗದ ಜಿಲ್ಲೆಗಳಲ್ಲಿ ಯಾವುದೇ ಸರಕಾರಗಳು ವಲಸೆ ತಡೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇಂದಿಗೂ ನನ್ನಲ್ಲಿದೆ ಎಂದು ಮೀನಾಕ್ಷಿ ಬಾಳಿ ಬೇಸರ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಭಾಗವಹಿಸಿದ್ದರು.