ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ನೆರವು; ಸಿಎಂ, ಪ್ರಭಾಕರ್ಗೆ ಕೆಯುಡಬ್ಲ್ಯುಜೆ ಅಭಿನಂದನೆ

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಹೊರನಾಡಿನ ಘಟಕವಾಗಿರುವ ಕಾಸರಗೋಡು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ಕರ್ನಾಟಕ ಸರಕಾರದಿಂದ 25 ಲಕ್ಷ ರೂ. ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇದಕ್ಕೆ ಸತತ ಪರಿಶ್ರಮ ವಹಿಸಿದ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.
ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕನ್ನಡ ಪತ್ರಿಕೆಗಳು ಈಗಲೂ ಹೆಚ್ಚಿನ ಪ್ರಸಾರ ಹೊಂದಿದ್ದು, ಕನ್ನಡ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಹಿತ ರಕ್ಷಣೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪತ್ರಕರ್ತರ ಸಂಘಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕಾಸರಗೋಡು ಘಟಕ ಮಾಡಿದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿ 25 ಲಕ್ಷ ರೂ. ಮಂಜೂರು ಮಾಡಿದ್ದಾರೆ.
ಗಡಿ ನಾಡಿನ ಕನ್ನಡ ಪತ್ರಕರ್ತರ ಹಿತ ರಕ್ಷಣೆಗೆ ಬದ್ದವಾಗಿರುವ ಕರ್ನಾಟಕ ಸರಕಾರ, ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ರೂ. ನೀಡಿರುವುದಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕಾಸರಗೋಡು ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಭಿನಂದಿಸಿದ್ದಾರೆ.
ಸರಕಾರ ನೀಡಿರುವ ಅನುದಾನ ಸಂಕಷ್ಟದಲ್ಲಿರುವ ಪತ್ರಕರ್ತ ಸಮುದಾಯದ ಯೋಗಕ್ಷೇಮಕ್ಕೆ ಮತ್ತು ಯುವ ಪತ್ರಕರ್ತರ ತರಬೇತಿ ಸೇರಿದಂತೆ ಅತ್ಯುತ್ತಮ ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ಶಿವಾನಂದ ತಗಡೂರು ತಿಳಿಸಿದ್ದು, ಅನುದಾನ ಕೊಡಿಸಲು ಸಹಕರಿಸಿದ ಕೆ.ವಿ.ಪ್ರಭಾಕರ್ ಆಶಯಗಳಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.