ಮೌಢ್ಯವನ್ನು ಬಿತ್ತಲು ನಾನು ʻಸೋಕಾಲ್ಡ್ʻ ವಿಶ್ವಗುರು ಅಲ್ಲ : ಸಚಿವ ದಿನೇಶ್ ಗುಂಡೂರಾವ್

Update: 2024-04-13 12:31 GMT

ಬೆಂಗಳೂರು : ಪ್ರತಿಪಕ್ಷ ನಾಯಕ ಅಶೋಕ್‍ರವರೇ, ರಾಜ್ಯದ ಜನರ ಆರೋಗ್ಯದ ವಿಚಾರದಲ್ಲಿ ಹುಡುಗಾಟ ಆಡಲು ನಾನು ನಿಮ್ಮ ಪಕ್ಷದ ‘ವಿಶ್ವಗುರು’ ಅಲ್ಲ. ತಟ್ಟೆ ಬಡಿದರೆ, ದೀಪ ಹಚ್ಚಿದರೆ, ಸೀಟಿ ಊದಿದರೆ ರೋಗಗಳು ವಾಸಿಯಾಗುತ್ತದೆ ಎಂಬ ಮೌಢ್ಯವನ್ನು ಬಿತ್ತಲು ನಾನು ಸೋಕಾಲ್ಡ್ ವಿಶ್ವಗುರು ಅಲ್ಲ. ಜನರ ಆರೋಗ್ಯದ ವಿಚಾರದಲ್ಲಿ ನಮ್ಮ ಸರಕಾರ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಪತಂಜಲಿ ಉತ್ಪನ್ನದ ಗುಣಮಟ್ಟ ಪರೀಕ್ಷೆಯಾಗಲಿ ಬಿಡಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ಅಶೋಕ್‍ರವರೇ, ನಿಮ್ಮ ಅಚ್ಚುಮೆಚ್ಚಿನ ಬ್ರ್ಯಾಂಡ್ ಪತಂಜಲಿಯ ವಿನಾಶಕಾರಿ ನಡೆಯ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್ ಕಳವಳ ಪಡಿಸಿದೆ. ಹೀಗಿದ್ದರೂ ನೀವು ಪತಂಜಲಿ ಸಂಸ್ಥೆಯ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ?, ನಿಮಗೆ ಜನರ ಆರೋಗ್ಯಕ್ಕಿಂತ, ಜನರಿಗೆ ವಿಷವುಣಿಸುತ್ತಿರುವ ವ್ಯಕ್ತಿ ಧರಿಸಿದ ಬಟ್ಟೆ ಕೇಸರಿ ಎಂಬುದೇ ಮುಖ್ಯವಾಯಿತೆ?’ ಎಂದು ಟೀಕಿಸಿದ್ದಾರೆ.

‘ಅಶೋಕ್‍ರವರೆ, ವಿಪಕ್ಷ ನಾಯಕರಾದ ನಿಮಗೆ ಪ್ರಸಕ್ತ ವಿದ್ಯಮಾನಗಳ ಮಾಹಿತಿ ಬೆರಳ ತುದಿಯಲ್ಲೇ ಇರಬೇಕು. ಕೇವಲ ರಾಜ್ಯದ ವಿದ್ಯಮಾನವಲ್ಲ, ದೇಶದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೂ ಇರಬೇಕು. ಯಾಕೆಂದರೆ ವಿಪಕ್ಷ ನಾಯಕ ಎಂಬ ಸ್ಥಾನದ ಮಹತ್ವವೇ ಅಂತದ್ದು. ಇರಲಿ, ಪತಂಜಲಿ ಸಂಸ್ಥೆಯ ಬಗ್ಗೆ ಅತ್ಯಂತ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋರ್ಟ್ ಎಂಬ ಮಾಹಿತಿ ನಿಮಗೆ ಗೊತ್ತಿಲ್ಲದಿರುವುದು ವಿಷಾದನೀಯ ಹಾಗೂ ದುರದೃಷ್ಟಕರ. ಓಪನ್ ಕೋರ್ಟ್‍ನಲ್ಲಿ ಬಾಬಾ ರಾಮ್‍ದೇವ್ ಹಾಗೂ ಬಾಲಕೃಷ್ಣರ ಬೆವರಿಳಿಸಿದೆ. ನಿಮ್ಮ ಪ್ರಕಾರ ಸುಪ್ರೀಂ ಕೋರ್ಟ್‍ಗೂ ಪತಂಜಲಿ ಸಂಸ್ಥೆ ಮೇಲೆ ದ್ವೇಷವಿದೆ ಎಂದು ಅರ್ಥವೇ?, ಉತ್ತರಿಸಿ’ ಎಂದು ಅವರು ಸವಾಲು ಹಾಕಿದ್ದಾರೆ.

‘ತಪ್ಪು ಜಾಹೀರಾತು ಮೂಲಕ ದೇಶದ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದ್ದ ಪತಂಜಲಿಯ ಬಾಬಾ ರಾಮ್‍ದೇವ್ ಹಾಗೂ ಬಾಲಕೃಷ್ಣರವರಿಗೆ ಸುಪ್ರೀಂ ಕೋರ್ಟ್ ತೆರೆದ ನ್ಯಾಯಾಲಯದಲ್ಲಿ ಛೀಮಾರಿ ಹಾಕಿ ನೀರಿಳಿಸಿದೆ. ಜೊತೆಗೆ ಈ ಇಬ್ಬರೂ ತಾವು ಮಾಡಿದ್ದ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದರೂ ಸುಪ್ರೀಂ ಅವರ ಕ್ಷಮೆಯನ್ನು ಮಾನ್ಯ ಮಾಡಿಲ್ಲ.

ಅದರರ್ಥ, ಪತಂಜಲಿ ಎಂಬ ಸಂಸ್ಥೆ ಜನರ ಅರೋಗ್ಯದ ಜೊತೆ ಆಡಿರುವ ಚೆಲ್ಲಾಟ ಕ್ಷಮೆಗೂ ಅರ್ಹವಲ್ಲ ಎಂಬುದು ಸುಪ್ರೀಂ ಅಭಿಪ್ರಾಯ. ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಆದೇಶಿಸಿದ್ದೇನೆ. ಇಷ್ಟಕ್ಕೇ ತುರಿಕೆ ರೋಗ ಬಂದಂತೆ ವರ್ತಿಸುತ್ತಿರುವ ವಿಪಕ್ಷ ನಾಯಕ ಅಶೋಕ್, ನನಗೆ ಪತಂಜಲಿ ಉತ್ಪನ್ನಗಳ ಬಗ್ಗೆ ಯಾಕಿಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ನಾನು ಉತ್ತರಿಸುವೆ, ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಲಿ. ಇದು ಸವಾಲು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News