ಇಸ್ರೇಲ್-ಇರಾನ್ ಸಂಘರ್ಷ ಜಾಗತಿಕ ಕಳವಳಕ್ಕೆ ಕಾರಣ : ವಿದೇಶಾಂಗ ಸಚಿವ ಎಸ್.ಜೈಶಂಕರ್

Update: 2024-04-16 13:33 GMT

Photo :x/@DrSJaishankar

ಬೆಂಗಳೂರು : ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷವು ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ರಾಜಾಜಿನಗರದ ದಿ ಇನ್ಸ್‍ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ(ಐಸಿಎಸ್‍ಐ) ಬೆಂಗಳೂರು ಚಾಪ್ಟರ್ ನಲ್ಲಿ ಆಯೋಜಿಸಿದ್ದ ‘ವಿಶ್ವಬಂಧು ಭಾರತ್’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ವಿಶ್ವದ ಯಾವುದೇ ಸಂಘರ್ಷ, ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ತೈಲ ಬೆಲೆ, ಆಹಾರ ದರಗಳ ಏರಿಕೆ, ಹಣದುಬ್ಬರ ಹೆಚ್ಚಳ ಒಳಗೊಂಡಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಗತ್ತಿನ ಎಲ್ಲ ಸಂಘರ್ಷ, ಸಮಸ್ಯೆಗಳಿಗೆ ‘ವಿಶ್ವಬಂಧು’ ಪರಿಕಲ್ಪನೆಯೆ ಪರಿಹಾರವಾಗಿದೆ ಎಂದು ಜೈಶಂಕರ್ ಪ್ರತಿಪಾದಿಸಿದರು.

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ತಮಗೆ ಸೂಚಿಸಿದ್ದಾರೆ. ಇರಾನ್ ನಲ್ಲಿ ಭಾರತದ ಹಡಗು ಸಿಲುಕಿಕೊಂಡಿದ್ದು, 17 ಭಾರತೀಯ ನಾಗರಿಕರು ಅದರಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರಲು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಸುಮಾರು 18 ದಶಲಕ್ಷ ಭಾರತೀಯರು ನೆಲೆಸಿದ್ದು, ಇವರ ಸುರಕ್ಷತೆಯೂ ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ರಶ್ಯಾ ಉಕ್ರೇನ್ ಭಾಗದಲ್ಲಿ ಯುದ್ಧದ ಗಂಭೀರತೆ ಇದ್ದು, ಗಾಝಾದಲ್ಲಿ ಸಂಘರ್ಷ ಮುಂದುವರೆದಿದೆ. ಭಾರತ ಫೆಸಿಫಿಕ್ ವಲಯದಲ್ಲಿ ಪರಿಸ್ಥಿತಿ ತ್ರಾಸದಾಯವಾಗಿದೆ. ಜಗತ್ತಿನ ಸುಮಾರು 20 ದೇಶಗಳು ಪರಸ್ಪರ ಮಾತುಕತೆ ನಡೆಸದ ಸ್ಥಿತಿಯಲ್ಲಿವೆ. ಇಂತಹ ಸವಾಲುಗಳನ್ನು ಎದುರಿಸಲು ಪ್ರಬುದ್ಧ ನಾಯಕತ್ವದ ಅಗತ್ಯವಿದ್ದು, ಪರಸ್ಪರ ಅರ್ಥಮಾಡಿಕೊಳ್ಳುವ, ಮಾತುಕತೆ ನಡೆಸುವ ಮಾರ್ಗಗಳನ್ನು ಅನುಸರಣೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯೂ ಇಂತಹ ವಿಷಯಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಆದರೆ ಭಾರತ ಅಭಿವೃದ್ಧಿಶೀಲ ದೇಶಗಳಿಗೆ ಗ್ಲೋಬಲ್ ಸೌತ್ ಪರಿಕಲ್ಪನೆಗೆ ಒತ್ತು ನೀಡಿದ್ದು, ನಾವು ಈ ರಾಷ್ಟ್ರಗಳಿಗೆ ಧ್ವನಿಯಾಗಿದ್ದೇವೆ. ಜಿ20 ಅಧ್ಯಕ್ಷತೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದೇವೆ ಎಂದು ಜೈಶಂಕರ್ ಹೇಳಿದರು.

ವಿಕಸಿತ ಭಾರತ ನಮ್ಮ ಗುರಿಯಾಗಿದ್ದು, ಕೆಲವೇ ವರ್ಷಗಳಲ್ಲಿ ಭಾರತ ಐದು ಟ್ರಿಲಿಯನ್ ಆರ್ಥಿಕತೆ ದೇಶವಾಗಲಿದೆ. 2030ರ ವೇಳೆಗೆ 10 ಟ್ರಿಲಿಯನ್ ಗೆ ತನ್ನ ಸಾಮಥ್ರ್ಯ ವೃದ್ಧಿಸಿಕೊಳ್ಳಲಿದೆ. 2047ರ ವೇಳೆಗೆ ವಿಕಸಿತ ಭಾರತ ನಮ್ಮ ಗುರಿ. ಈ ವೇಳೆಗೆ ಎಲ್ಲ ವಲಯದ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗಲಿದ್ದು, ಇದೇ ರೀತಿ ಕಂಪೆನಿ ಸೆಕ್ರೇಟರೀಸ್ ಗಳಿಗೂ ವಿಪುಲ ಅವಕಾಶಗಳು ದೊರೆಯಲಿದೆ. ದೇಶದ ಅಭಿವೃದ್ಧಿಯಲ್ಲಿ ಕಂಪೆನಿ ಸೆಕ್ರೇಟರಿಗಳ ಪಾತ್ರ ಅನನ್ಯ ಎಂದು ಅವರು ಬಣ್ಣಿಸಿದರು.

ಎಲೆಕ್ಟ್ರಿಕ್ ವಾಹನಗಳು, ಚಿಪ್ ಗಳ ಉತ್ಪಾದನೆ ಸೇರಿದಂತೆ ಎಲ್ಲ ವಲಯಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದು ಕೃತಕ ಬುದ್ದಿಮತ್ತೆ ಯುಗವಾಗಿದ್ದು, ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೈಸರ್ಗಿಕ ಬುದ್ದಿಮತ್ತೆ ಅಗತ್ಯವಾಗಿದೆ. ಅಂತಹ ಸಾಮಥ್ರ್ಯರ್ಥ್ಯ ಕೂಡ ನಮ್ಮಲ್ಲಿದೆ ಎಂದು ಜೈಶಂಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಐಸಿಎಸ್‍ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷ ವೆಂಕಟ ಸುಬ್ಬಾರಾವ್ ಕಲ್ವಾ, ಕಾರ್ಯದರ್ಶಿ ವಿಶ್ವಾಸ್ ಹೆಗಡೆ, ಎಸ್‍ಐಆರ್‍ಸಿ ಅಧ್ಯಕ್ಷ ಪ್ರದೀಪ್ ಬಿ ಕುಲಕರ್ಣಿ, ಕೇಂದ್ರೀಯ ಮಂಡಳಿ ಸದಸ್ಯ ಸಿ.ದ್ವಾರಕಾನಾಥ್, ಬೆಂಗಳೂರು ಚಾಪ್ಟರ್ ಉಪಾಧ್ಯಕ್ಷ್ಯೆ ದೇವಿಕಾ ಸತ್ಯನಾರಾಯಣ, ಕೇಂದ್ರೀಯ ಮಂಡಳಿ ಮಾಜಿ ಸದಸ್ಯ ಗೋಪಾಲಕೃಷ್ಣ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News