ರಾಜ್ಯದ ವಿವಿಧ ಉದ್ದಿಮೆ ವಲಯಗಳಲ್ಲಿ ವಿಪುಲ ಅವಕಾಶ : ಎಂ.ಬಿ.ಪಾಟೀಲ್‌

Update: 2024-07-02 16:42 GMT

ಬೆಂಗಳೂರು : ಮುಂದಿನ ವರ್ಷದ ಫೆಬ್ರವರಿಯಲ್ಲಿ ನಗರದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವುದಕ್ಕೆ ದಕ್ಷಿಣ ಕೊರಿಯಾದ ಉದ್ಯಮಿಗಳನ್ನು ಆಹ್ವಾನಿಸಲು ಕರ್ನಾಟಕ ಸರಕಾರವು ಮಂಗಳವಾರ ಸೋಲ್‍ನಲ್ಲಿ ಯಶಸ್ವಿಯಾಗಿ ರೋಡ್ ಶೋ ನಡೆಸಿತು.

ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ವಿದ್ಯುತ್ ಚಾಲಿತ ವಾಹನಗಳ ಭವಿಷ್ಯ, ಅತ್ಯಾಧುನಿಕ ಯಂತ್ರೋಪಕರಣ, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ವಿವಿಧ ಉದ್ದಿಮೆ ವಲಯಗಳಲ್ಲಿ ರಾಜ್ಯದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಸರಕಾರ ನೀಡಿದ ಆಹ್ವಾನ ಮನ್ನಿಸಿ ಕೆಲ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿ, ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಕೈಜೋಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕದಲ್ಲಿ ಇರುವ ಪೂರಕ ಪರಿಸರ ಹಾಗೂ ಹೂಡಿಕೆಗೆ ಕರ್ನಾಟಕವು ಅಚ್ಚುಮೆಚ್ಚಿನ ತಾಣವಾಗಿರುವುದನ್ನು ರೋಡ್ ಶೋನಲ್ಲಿ ಮನವರಿಕೆ ಮಾಡಿಕೊಡಲಾಯಿತು. ಭಾರತದಲ್ಲಿ ಪ್ರಮುಖ ಆವಿಷ್ಕಾರ ಕೇಂದ್ರವಾಗಿರುವ ಕರ್ನಾಟಕವು ರೋಡ್ ಶೋನಲ್ಲಿ ಕೊರಿಯಾದ ಉದ್ಯಮಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು.

ದಕ್ಷಿಣ ಕೊರಿಯಾದಲ್ಲಿನ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ(ಐಸಿಸಿಕೆ)ಸಹಯೋಗದಲ್ಲಿ ಈ ರೋಡ್ ಶೋ ಏರ್ಪಡಿಸಲಾಗಿತ್ತು. ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು, ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ವಿಸ್ತರಣೆಗೆ ಕೊರಿಯಾದ ಕಂಪನಿಗಳಿಗೆ ಕರ್ನಾಟಕದಲ್ಲಿ ಇರುವ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟಿತು. ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಉನ್ನತ ಮಟ್ಟದ ನಿಯೋಗವು ದಕ್ಷಿಣ ಕೊರಿಯಾಕ್ಕೆ 5 ದಿನಗಳ ಭೇಟಿ ನೀಡುತ್ತಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ರೋಡ್ ಶೋನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಈ ರೋಡ್ ಶೋನಲ್ಲಿ ದಕ್ಷಿಣ ಕೊರಿಯಾದ 45ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ಪ್ರದರ್ಶಿಸಿದವು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News