ಟಿ.ನರಸೀಪುರ | ʼವಾರ್ತಾಭಾರತಿʼ ವರದಿ ಫಲಶ್ರುತಿ : ದಲಿತರ ಬಡಾವಣೆಯಲ್ಲಿ ನಿಂತ ಕೊಳಚೆ ನೀರಿಗೆ ಕೊನೆಗೂ ಮುಕ್ತಿ
ಬೆಂಗಳೂರು : ‘ದಲಿತ ಬಡಾವಣೆಯಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ : ಆರೋಪ’ ಸಂಬಂಧ ‘ವಾರ್ತಾಭಾರತಿ’ಯಲ್ಲಿ 2024ರ ಮೇ30ರಂದು ಸುದ್ದಿ ಪ್ರಕಟವಾಗಿದ್ದು, ಟಿ.ನರಸೀಪುರ ತಾಲೂಕಿನ ಸುಜ್ಜಲೂರು ಗ್ರಾಮದ ದಲಿತ ಸಮುದಾಯದ ಬಡಾವಣೆಯಲ್ಲಿ ಅನೈರ್ಮಲ್ಯಕ್ಕೆ ಕಾರಣವಾಗಿದ್ದ ಕೊಳಚೆ ನೀರನ್ನು ಹೊರ ಹೋಗುವಂತೆ ವ್ಯವಸ್ಥೆ ಕಲ್ಪಿಸಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ 2012-13ರಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು, ಚರಂಡಿ ನೀರು ಹೊರಗೆ ಹೋಗಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಆದರೆ, ಖಾಸಗಿ ಜಮೀನಿಗೆ ಹೋಗುತ್ತಿದ್ದ ಚರಂಡಿ ನೀರಿಗೆ, ಜಮೀನು ಮಾಲಕರು ಕಟ್ಟೆಕಟ್ಟಿದ್ದರಿಂದ ಆ ನೀರು, ದಲಿತ ಸಮುದಾಯದ ಮನೆಗಳಿಗೆ ನುಗ್ಗಿ ಸಮಸ್ಯೆಯಾಗಿತ್ತು. ಆದರೆ, ಇದೀಗ ಚರಂಡಿ ನೀರು ರಸ್ತೆಗೆ ಮತ್ತು ಮನೆಗಳಿಗೆ ನುಗ್ಗದಂತೆ ಸಮುದಾಯ ಇಂಗುಗುಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮನೆಗಳಿಗೆ ಚರಂಡಿ ನೀರು ನುಗ್ಗದಂತೆ ಮೋಟಾರ್ ವ್ಯವಸ್ಥೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಗಿದೆ.
ಜತೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚರಂಡಿ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸಲು ಖಾಸಗಿ ಜಮೀನು ಸ್ವಾಧೀನಕ್ಕೆ ತಹಶೀಲ್ದಾರರೊಂದಿಗೆ ಸಮಾಲೋಚನೆ ನಡೆಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಚರಂಡಿ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಮೈಸೂರು ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಿಇಓ ಕಾರ್ಯಾಲಯ ತಿಳಿಸಿದೆ.