ಸೇತುವೆ ನಿರ್ಮಾಣದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ : ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2024-09-26 14:38 GMT

ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಂಗಳೂರು : ನಮ್ಮಲ್ಲಿರುವ ಜ್ಞಾನ, ತಂತ್ರಜ್ಞಾನವನ್ನು ಸೇತುವೆ ನಿರ್ಮಾಣದ ಹೊಸ ಯೋಜನೆಗಳಿಗೆ ಅಳವಡಿಸಿಕೊಂಡರೆ ದೇಶ ಹೆಚ್ಚು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಇಂಡಿಯನ್ ರೋಡ್ ಕಾಂಗ್ರೆಸ್, ರಾಜ್ಯದ ಲೋಕೋಪಯೋಗಿ ಇಲಾಖೆ, ಪಿಐಎಆರ್‍ಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ಅಭಿವೃದ್ಧಿಶೀಲ ಸೇತುವೆ ನಿರ್ವಹಣೆ’ ಕುರಿತ 2 ದಿನಗಳ ಅಂತರ್‌ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವದ ಆರ್ಥಿಕತೆಯಲ್ಲಿ ಭಾರತ ಗುರುತಿಸಿಕೊಂಡಿದೆ. ನಾವು ನಮ್ಮ ಜ್ಞಾನದ ಸಹಾಯದಿಂದ ಸಂಪತ್ತನ್ನು ವೃದ್ಧಿಸುವ ಕಡೆಗೆ ಗಮನಹರಿಸಬೇಕು. ಸೇತುವೆ, ರಸ್ತೆ ನಿರ್ಮಾಣದಲ್ಲಿ ವೃತ್ತಿಪರತೆ ಕೋರಿ ಅದು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು. ಕೆಲ ಸಮುದ್ರ ತೀರದ ಸೇತುವೆಗಳು ಕುಸಿದಿದ್ದು, ಈ ಕುರಿತು ನಾವು ಮೌಲ್ಯಮಾಪನ ನಡೆಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಹಾಗೆಯೇ ಸಮಯದ ಪ್ರಾಮುಖ್ಯತೆಯನ್ನು ಅರಿತು, ನಿರ್ದಿಷ್ಟ ಸಮಯದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಬೇಕಿದೆ. ಈಗ ಇಡೀ ಜಗತ್ತೆ ಡಿಜಿಟಲ್ ಯುಗಕ್ಕೆ ಕಾಲಿಡುತ್ತಿದೆ. ಹೇಗೆ ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳಬಹುದೆಂಬ ಚಿಂತನೆಯನ್ನು ನಾವು ನಡೆಸಬೇಕು. ಬೇರೆ ದೇಶಗಳಿಗೆ ತೆರಳಿ ಅಧ್ಯಯನ ನಡೆಸಿ, ಅವರಿಂದ ಹೊಸ ತಂತ್ರಜ್ಞಾನವನ್ನು ಅರಿತುಕೊಳ್ಳಬೇಕಿದೆ ಎಂದು ನಿತಿನ್ ಗಡ್ಕರಿ ಕರೆ ನೀಡಿದರು.

ಇದೀಗ ನಾಗ್ಪುರದಲ್ಲಿ ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್‍ಗಳನ್ನು ಅನಾವರಣಗೊಳಿಸಲಾಗುತ್ತಿದೆ. ಇದು ಕಡಿಮೆ ಟಿಕೆಟ್ ದರದಲ್ಲಿ ಉನ್ನತ ಸೌಕರ್ಯದೊಂದಿಗೆ ಸಂಚರಿಸಲಿವೆ. ಇದರಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೊಸ ದೃಷ್ಠಿಕೋನ, ತ್ಯಾಜ್ಯವಸ್ತುಗಳ ನಿರ್ವಹಣೆ, ಗುಣಮಟ್ಟದ ನಿರ್ವಹಣೆ, ವಿಶ್ವಾಸಾರ್ಹತೆಗಳಿಂದ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಹುದು ಎಂದು ನಿತಿನ್ ಗಡ್ಕರಿ ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಬಹಳಷ್ಟು ಸೇತುವೆಗಳು ನೆಲಸಮಗೊಂಡಿರುವುದು ವಿಪರ್ಯಾಸ. ಹೊಸ ತಂತ್ರಜ್ಞಾನದಲ್ಲಿ ಇವುಗಳ ನಿರ್ಮಾಣ, ನಿರ್ವಹಣೆಯನ್ನು ನಡೆಸಬೇಕು. ಸಮಸ್ಯೆಗಳಿಗೆ ವಸ್ತುನಿಷ್ಠ ಶಾಶ್ವತ ಪರಿಹಾರ ಒದಗಿಸಬೇಕು. ನಾವು ಇಂದು ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸೇತುವೆ ನಿರ್ಮಾಣದಲ್ಲಿ ನೂತನ ತಂತ್ರಜ್ಞಾನ ಆವಿಷ್ಕಾರದಿಂದ ಬದಲಾವಣೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಹಾನಿರ್ದೇಶಕ ಧರ್ಮಾನಂದ ಸಾರಂಗಿ, ಹೆಚ್ಚುವರಿ ಮಹಾನಿರ್ದೇಶಕ ಸಂಜಯ್ ಕುಮಾರ್ ನಿರ್ಮಲ್, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕಾರ್ಯದರ್ಶಿ ಮತ್ತು ರಾಜ್ಯ ನಿರ್ದೇಶನ ಸಮಿತಿ ಅಧ್ಯಕ್ಷ ಸತ್ಯನಾರಾಯಣ, ಮುಖ್ಯಯೋಜನಾ ಅಧಿಕಾರಿ ಎಸ್.ಎಫ್.ಪಾಟೀಲ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News