ರೇಣುಕಾಸ್ವಾಮಿ ಕೊಲೆ ಪ್ರಕರಣ | ತನಿಖಾಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

Update: 2024-06-19 13:42 GMT

Photo : ದರ್ಶನ್/‌ ವಿಜಯಲಕ್ಷ್ಮಿ(@vijayaananth2)

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಆರೋಪಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ತನಿಖಾಧಿಕಾರಿಗಳ ಮುಂದೆ ಬುಧವಾರ ಹಾಜರಾಗಿದ್ದಾರೆ.

ನಗರದ ಪಟ್ಟಣಗೆರೆ ಶೆಡ್‍ನಲ್ಲಿ ಹತ್ಯೆಯಾದ ರೇಣುಕಾಸ್ವಾಮಿಯನ್ನು ಭೇಟಿಯಾದಾಗ ನಟ ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಜೂ.16ರಂದು ಆರ್.ಆರ್.ನಗರದ ದರ್ಶನ್ ಅವರ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಶೂ ಪತ್ತೆಯಾಗಿರಲಿಲ್ಲ.

‘ಶೂ ಮತ್ತು ಇತರ ಕೆಲ ಬೆಲೆಬಾಳುವ ವಸ್ತುಗಳನ್ನು ವಿಜಯಲಕ್ಷ್ಮೀ ಅವರ ಮನೆಗೆ ಕೊಟ್ಟಿರುವುದಾಗಿ' ದರ್ಶನ್ ಅವರ ಕಾಸ್ಟ್ಯೂಮ್ ಅಸಿಸ್ಟೆಂಟ್ ಪೊಲೀಸರಿಗೆ ತಿಳಿಸಿದ್ದ. ಅದರ ಅನ್ವಯ ಅದೇ ದಿನ ಬನಶಂಕರಿಯ 3ನೇ ಹಂತದಲ್ಲಿರುವ ವಿಜಯಲಕ್ಷ್ಮೀ ಅವರ ಅಪಾರ್ಟ್‍ಮೆಂಟ್ ಬಳಿ ತೆರಳಿದ್ದ ಪೊಲೀಸರು ಶೂ ಅನ್ನು ವಶಕ್ಕೆ ಪಡೆದಿದ್ದರು.

ಅದೇ ವಿಚಾರವಾಗಿ ವಿಜಯಲಕ್ಷ್ಮೀ ಅವರ ಹೇಳಿಕೆ ಅಗತ್ಯ ಇರುವುದರಿಂದ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರನ್ವಯ ಬುಧವಾರ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವಿಜಯಲಕ್ಷ್ಮೀ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News