ಬೀದರ್ | ಬಸವಣ್ಣನವರ ಮೂರ್ತಿಗೆ ಲಾರಿ ಢಿಕ್ಕಿ ; ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ

ಬೀದರ್ : ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿ ಇರುವ ಬಸವಣ್ಣನವರ ಮೂರ್ತಿಗೆ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಇಂದು ಸುಮಾರು 4 ಗಂಟೆಗೆ ಲಾರಿಯೊಂದು ಬಸವಣ್ಣನವರ ಮೂರ್ತಿಗೆ ಢಿಕ್ಕಿ ಹೊಡೆದು ಮೂರ್ತಿಯನ್ನು ವಿರೂಪಗೊಳಿಸಿದ್ದು, ಘಟನೆ ವಿರುದ್ಧ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಶಿವಾನಂದ್ ಪವಾಡಶೆಟ್ಟಿ ಹಾಗೂ ಖಟಕ್ ಚಿಂಚೋಳಿ ಪಿಎಸ್ಐ ಸುದರ್ಶನ್ ರೆಡ್ಡಿ ಅವರು, ಢಿಕ್ಕಿ ಹೊಡೆದ ಲಾರಿ ಮತ್ತು ಲಾರಿ ಚಾಲಕ ಪರಾರಿಯಾಗದೆ ಇಲ್ಲೇ ಉಳಿದಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಭಟನಾಕಾರರನ್ನು ತಿಳುವಳಿಕೆ ಹೇಳಿ ರಸ್ತೆ ಸುಗಮ ಸಂಚಾರ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜ.15 ರಂದು ಕೂಡ ಇದೇ ಬಸವಣ್ಣನ ಮೂರ್ತಿಗೆ ಕಬ್ಬಿನ ಟ್ರ್ಯಾಕ್ಟರ್ ಢಿಕ್ಕಿ ಹೊಡೆದು ವಿರೂಪಗೊಳಿಸಿತ್ತು. ಆಗಲೂ ಕೂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಹೊಸದಾಗಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟಿದ್ದರು. ಆದರೆ ಇದೀಗ ಬಸವಣ್ಣನವರ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೊದಲೇ ಲಾರಿಯೊಂದು ಢಿಕ್ಕಿ ಹೊಡೆದು ವಿರೂಪಗೊಳಿಸಿರುವ ಘಟನೆ ನಡೆದಿದ್ದು, ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.