ಬೀದರ್ | ಪ್ರವೀಣ್ ಪಡಗಲ್ ಮೃತದೇಹ ಪತ್ತೆ ಪ್ರಕರಣ : ಸೂಕ್ತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಬೀದರ್ : ಆಂಧ್ರಪ್ರದೇಶ ರಾಜಮಹೇಂದ್ರವರಂ ಹತ್ತಿರ ಕ್ರೈಸ್ತ ಅಪೊಸ್ಟಲಿಕ್ ಪ್ರವೀಣ್ ಪಡಗಲ್ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯು ಪ್ರತಿಭಟನೆ ನಡೆಸಿತು.
ಇಂದು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮಾ.25 ರಂದು ಪ್ರವೀಣ್ ಪಗಡಲ್ ಅವರ ಮೃತದೇಹವು ಆಂಧ್ರಪ್ರದೇಶದ ರಾಜಮಹೇಂದ್ರವರಂ ಹತ್ತಿರ ಪತ್ತೆಯಾಗಿದೆ. ಅವರ ಮರಣದ ಸುದ್ದಿ ಭಾರತ ದೇಶದ ಎಲ್ಲಾ ಕ್ರೈಸ್ತ ಸಮುದಾಯದವರಲ್ಲಿ ತೀವ್ರ ಆಘಾತತಂದಿದೆ. ಅವರ ಮರಣವು ಅನೇಕ ಅನುಮಾನಗಳು ಹುಟ್ಟುಹಾಕಿದ್ದು, ಆಂಧ್ರ ಸರಕಾರ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ ಪಡಿಸದೇ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ ಸುಮಾರು ವರ್ಷಗಳಿಂದ ಅವರಿಗೆ ಹಲವು ಬಾರಿ ಜೀವ ಬೆದರಿಕೆ ಬಂದಿದ್ದವು. ಆದರೂ ಸಹ ಅವರು ಸತತವಾಗಿ ಅವರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು. ಇದರಿಂದಾಗಿ ಅವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅವರ ಮರಣದ ಕುರಿತು ಕೇಂದ್ರ ಸರ್ಕಾರ ಸಿಬಿಐ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷರ ಅನೀಲಕುಮಾರ್ ಜಾಧವ್, ಜಿಲ್ಲಾಧ್ಯಕ್ಷ ಜಗನ್ನಾಥ್ ಕೌಠಾ, ಶರಣಪ್ಪಾ, ರಾಜಕುಮಾರ್, ಬಿಶಾಪ್ ಸಾವನ್ ಪಾಲ್, ಸ್ವಾಮಿದಾಸ, ಸಂಜಯ್ ಜಾಗೀರದಾರ್, ಅಮರ್ ಭಾಂಗೆ, ಉಮೇಶ್, ರಾಜು ಕೋಳಾರ್, ಪಾಸ್ಟರ್ ಅಬ್ರಯಾಂ, ಪಾಸ್ಟರ್ ಮನೋಜ್, ಪಾಸ್ಟರ್ ಸಿ.ಎಂ. ಬರ್ಮಾ, ಪಾಸ್ಟರ್ ಪ್ರವೀಣ್, ಪಾಸ್ಟರ್ ಆನಂದ್, ಪಾಸ್ಟರ್ ನೊಹಾ, ಪಾಸ್ಟರ್ ವಿಜಯಕುಮಾರ್, ಪಾಸ್ಟರ್ ಮನೋಹರ್, ಅಭಿ ಕಾಳೆ, ಅರುಣಕುಮಾರ್, ಇಮಾನ್ಯೂವೇಲ್, ರಿಚಂಡ್ ಸೊರಳ್ಳಿಕರ್, ಇಮಾನಾವೇಲ್ ಮಂದಕನಳ್ಳಿ, ಶಾಂತಕುಮಾರ ಗುತ್ತೆದಾರ್ ಹಾಗೂ ಪ್ರಭುದಾಸ್ ಸೇರಿದಂತೆ ಅನೇಕ ಕ್ರಿಶ್ಚಿಯನ್ ಮುಖಂಡರು ಉಪಸ್ಥಿತರಿದ್ದರು.