ಚಿಕ್ಕಮಗಳೂರು| ಬಾಲಕಿಗೆ ಸಲೂನ್ ಮಾಲಕನಿಂದ ಲೈಂಗಿಕ ಕಿರುಕುಳ; ಆರೋಪ

Update: 2024-09-22 13:01 GMT

ಚಿಕ್ಕಮಗಳೂರು: ಸಲೂನ್‍ಗೆ ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಉದ್ರಿಕ್ತರ ಗುಂಪು ಸಲೂನ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಶನಿವಾರ ರಾತ್ರಿ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದ್ದು, ಘಟನೆಯಿಂದಾಗಿ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶನಿವಾರ ಸಂಜೆ ಕಡೂರು ಪಟ್ಟಣದ ಸಲೂನ್ ವೊಂದಕ್ಕೆ ಮಹಿಳೆಯೊಬ್ಬರು ತನ್ನ 8 ವರ್ಷದ ಪುತ್ರಿಯನ್ನು ಕೂದಲು ಕಟಿಂಗ್‍ಗಾಗಿ ಕರೆತಂದಿದ್ದರು. ಈ ವೇಳೆ ಬಾಲಕಿಯನ್ನು ಸಲೂನ್ ನಲ್ಲಿ ಬಿಟ್ಟು ಮನೆಗೆ ಬೀಗ ಹಾಕಿಕೊಂಡು ಬರುತ್ತೇನೆ ಎಂದು ಬಾಲಕಿ ತಾಯಿ ಮಾಲಕನಿಗೆ ಹೇಳಿ ಹೋಗಿದ್ದರು. ಬಾಲಕಿ ತಾಯಿ ಮನೆಗೆ ಹೋಗಿ ಹಿಂದಿರುಗಿದಾಗ ಕಟಿಂಗ್ ಶಾಪ್‍ನಲ್ಲಿದ್ದ ವ್ಯಕ್ತಿ ಸಲೂನ್ ಬಾಗಿಲು ಹಾಕಿಕೊಂಡು ಮಗುವಿನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಮಗು ಕಿರುಚಿಕೊಂಡಿದ್ದು, ಸ್ಥಳಕ್ಕೆ ಬಂದ ತಾಯಿ ಸಲೂನ್‍ನಲ್ಲಿದ್ದ ವ್ಯಕ್ತಿ ವರ್ತನೆಗೆ ಹೆದರಿ ಕಿರುಚಾಡಿದ್ದಾರೆ. 

ಸಲೂನ್‍ನಲ್ಲಿದ್ದ ವ್ಯಕ್ತಿ ಬಾಲಕಿಗೆ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ನೂರಾರು ಜನ ಸಲೂನ್ ಶಾಪ್ ಎದುರು ಜಮಾಯಿಸಿದ್ದು, ಈ ವೇಳೆ ಕೆಲವರು ಕಟಿಂಗ್ ಶಾಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಲಾದ ವ್ಯಕ್ತಿ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವಿಚಾರ ಪಟ್ಟಣದಾದ್ಯಂತ ಹರಡಿದ್ದರಿಂದ ಕಡೂರು ಪಟ್ಟಣದಲ್ಲಿ ಕೆಲ ಹೊತ್ತು ಉಧ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಮಗಳೂರು ಎಸ್ಪಿ ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ಆಕ್ರೋಶಿತರನ್ನ ಸಮಾಧಾನ ಪಡಿಸಿದರು.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಹೇಳಲಾದ ಆರೋಪಿ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪೊಸ್ಕೋ ಪ್ರಕರಣ ಪ್ರಕರಣ ದಾಖಲಾಗಿದ್ದು, ಈ ಘಟನೆಯ ಹಿನ್ನೆಲೆಯಲ್ಲಿ ಕಡೂರು ಪಟ್ಟಣದ ಪರಿಸ್ಥಿತಿ ಬೂದಿ ಮುಚ್ವಿದ ಕೆಂಡದಂತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News