ಚಿಕ್ಕಮಗಳೂರು: ಬಂದೂಕು ಸ್ವಚ್ಛ ಮಾಡುವ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

Update: 2024-08-27 13:34 GMT

ಚಿಕ್ಕಮಗಳೂರು: ಮನೆಯ ಶೆಡ್‍ನಲ್ಲಿಟ್ಟಿದ್ದ ಬಂದೂಕನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಮಲ್ಲಂದೂರು ಗ್ರಾಮದ ನಿವಾಸಿ ಅರುಣ್(47) ಎಂದು ಗುರುತಿಸಲಾಗಿದೆ. ಅರುಣ್ ಮಂಗಳವಾರ ತಮ್ಮ ಮನೆಯ ಸಮೀಪದಲ್ಲಿದ್ದ ಶೆಡ್‍ನಲ್ಲಿ ಬಂದೂಕನ್ನು ಸ್ವಚ್ಛ ಮಾಡಲು ಹೋಗಿದ್ದರು. ಈ ವೇಳೆ ಬಂದೂಕಿನ ನಳಿಕೆಗೆ ಕೈ ತಾಗಿ ಬಂದೂಕಿನಲ್ಲಿದ್ದ ಗುಂಡು ಅರುಣ್ ಅವರ ಕಣ್ಣು ಸೀಳಿಕೊಂಡು ತಲೆಯಿಂದ ಹೊರ ಬಂದಿದೆ. ಘಟನೆಯಲ್ಲಿ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಮಲ್ಲಂದೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನಕ್ಕೆ ಕೊಂಡೊಯ್ಯಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ನಡೆದ ಘಟನೆಯೋ ಎಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News