ಬಜ್ಪೆ: ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ, ದಂಡ

Update: 2023-11-03 17:29 GMT

ಮಂಗಳೂರು: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕುವರೆ ವರ್ಷದ ಹಿಂದೆ ನಡೆದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1) (ಪೊಕ್ಸೊ) ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹಾರ್ದೊಳ್ಳಿ ತಾಲೂಕಿನ ಶ್ರೀಕಾಂತ್ ಹನುಮಂತ ಶಿಕ್ಷೆಗೊಳಗಾದ ಆರೋಪಿ.

ಬಜ್ಪೆ ಸಮೀಪದ ಕರಂಬಾರು ಗ್ರಾಮದ ಕಂಪೆನಿಯೊಂದರ ಶೆಡ್‌ನಲ್ಲಿ ಪರಿಶಿಷ್ಟ ಪಂಗಡದ ಕುಟುಂಬಕ್ಕೆ ಸೇರಿದ ಅಪ್ರಾಪ್ತೆಯು ತನ್ನ ಪಾಲಕರ ಜತೆ ವಾಸವಾಗಿದ್ದಳು. ಪಕ್ಕದ ಶೆಡ್‌ನಲ್ಲೇ ಆರೋಪಿ ಕೂಡ ವಾಸವಾಗಿದ್ದ. ಬಾಲಕಿಯ ಪಾಲಕರು ಮನೆಯಲ್ಲಿಲ್ಲದ ಸಂದರ್ಭ ಆರೋಪಿಯು ಆಕೆಯ ಬಳಿ ತೆರಳಿ ಪ್ರೀತಿಸುವುದಾಗಿ ನಂಬಿಸಿ 2019ರ ಎ.12ರಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದ ಮತ್ತು ಈ ವಿಷಯ ಇತರರ ಬಳಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು.

ಶಾಲಾ ವಿದ್ಯಾರ್ಥಿನಿಯಾಗಿದ್ದ ಬಾಲಕಿಯು ಅನಾರೋಗ್ಯಕ್ಕೀಡಾದಾಗ ಪರೀಕ್ಷಿಸಿದ ವೇಳೆ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಅಂದಿನ ಮಂಗಳೂರು ಉತ್ತರ ವಲಯ ಎಸಿಪಿ ಶ್ರೀನಿವಾಸ ಗೌಡ ಆರ್. ಪ್ರಾಥಮಿಕ ತನಿಖೆ ನಡೆಸಿದ್ದರೆ, ಇನ್ನೋರ್ವ ಎಸಿಪಿ ಬೆಳ್ಳಿಯಪ್ಪ ಕೆ.ಯು. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆಯು ಭಾರತೀಯ ದಂಡಸಂಹಿತೆ ಕಲಂ 376 (2)(ಎನ್)ರಡಿ 10 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳು ಕಠಿಣ ಸಜೆ, ಕಲಂ 376(3)ರಡಿ 20 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿಣ ಸಜೆ, ಕಲಂ 506ರಡಿ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 10.50 ಲ.ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿಯರಾದ ಸಹನಾದೇವಿ ಮತ್ತು ಜ್ಯೋತಿ ಪ್ರಮೋದ್ ನಾಯಕ್ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News